ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರಾತುಷ್ಟ್ರನ ತತ್ವ ದರ್ಶನಗಳು ಎಷ್ಟು ಪ್ರಸ್ತುತ?

Last Updated 23 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬು ದ್ಧ, ರಾಮಕೃಷ್ಣ ಪರಮಹಂಸ,  ವಿವೇಕಾನಂದ, ಗಾಂಧಿ ಮುಂತಾದವರು ಮತ್ತೊಮ್ಮೆ ಬರುವುದಾಗಿದ್ದರೆ ಅವರ ಜೊತೆಯಲ್ಲಿ ಜರಾತುಷ್ಟ್ರ (Zarathustra ಅಥವಾ Zoroaster) ಕೂಡ ಇದ್ದರೆ ಎಷ್ಟು ಚೆಂದ? ಎಲ್ಲಾ ಮಹಾತ್ಮರ ಬಗ್ಗೆ ಮತ್ತೆ ಮತ್ತೆ ಮಾತಾಡುವವರು, ಬರೆಯುವವರು ಒಮ್ಮಮ್ಮೆಯಾದರೂ ಯಾಕೆ ಜರಾತುಷ್ಟ್ರನ ಹೆಸರನ್ನು ಎತ್ತುವುದಿಲ್ಲ ಎನ್ನುವ ಕುತೂಹಲ ನನ್ನನ್ನು ಬಹಳ ಕಾಲ ಕಾಡಿದೆ.
    
ಜರಾತುಷ್ಟ್ರನ ದರ್ಶನ ಅಥವಾ ತತ್ವವು ಅವನ `ಗಾಥಾಗಳು  (ಎಠಿ) (ಬೈಬಲಿನಂತೆಯೇ ಂಡ್ ಅವೆಸ್ತಾ (ಘಛ್ಞಿ ಅಛಿಠಿ) ಎಂಬ ಹೆಸರಿನಲ್ಲಿ ಲೋಕಪ್ರಿಯವಾಗಿದೆ) ಎಂಬ ಬೃಹತ್ ಗ್ರಂಥದಲ್ಲಿ ದೊರೆಯುತ್ತದೆ. ಜರಾತುಷ್ಟ್ರನ ದರ್ಶನವಾಗಿರುವ ಜೊರಾಸ್ಟ್ರಿಯನಿಸಮ್ ಅವನ ಮತ್ತು ಅವನ ನಂತರದ ಕಾಲದಲ್ಲಿ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಎಲ್ಲಾ ಕಡೆ ಪ್ರಸಾರಗೊಂಡಿತ್ತು. ಜರಾತುಷ್ಟ್ರನ ಜನನ ಕಾಲವನ್ನು ಕ್ರಿಸ್ತಪೂರ್ವ ಆರು ಸಾವಿರ ವರ್ಷಗಳೆಂದು ನಂಬಲಾಗುತ್ತದೆ.

ಆದರೆ ಪ್ಲುಟಾರ್ಚ್ ಮುಂತಾದ ಕೆಲವು ಲೇಖಕರ ಪ್ರಕಾರ ಜರಾತುಷ್ಟ್ರನ ಜನನ ಕಿಸ್ತಪೂರ್ವ 18ನೇ ಶತಮಾನದಿಂದ 6ನೇ ಶತಮಾನದ ನಡುವೆ. ಈ ವಿಚಾರದಲ್ಲಿ ಇನ್ನೂ ಒಮ್ಮತ ಉಂಟಾಗಿಲ್ಲವಾದರೂ ಕ್ರಿಸ್ತಪೂರ್ವ 6ನೇ ಶತಮಾನಕ್ಕೂ ಮೊದಲು ಎಂದು ಸಾಮಾನ್ಯವಾಗಿ ಉಲ್ಲೇಖಿಸುವುದು ರೂಢಿಯಾಗಿದ್ದು, ಇದನ್ನು ಇತಿಹಾಸ ತಜ್ಞರು ಕೂಡ ಒಪ್ಪಿಕೊಂಡಿದ್ದಾರೆ.

ಯಾರಿವತ್ತು ನಮಗೆ ಬಹಳ ಹತ್ತಿರ? ಬುದ್ಧನೆ? ಶ್ರಿಕೃಷ್ಣನೆ? ಯೇಸು ಕ್ರಿಸ್ತನೆ? ಅತ್ಯಂತ ದೂರದಲ್ಲಿರುವ ಎಲ್ಲವೂ  ಪಾರಮಾರ್ಥಿಕವಾಗಿ ನಮಗೆ ಬಹಳ ದೂರವಾಗಿರುವಂತೆ ಹತ್ತಿರವೂ ಹೌದು. ಬುದ್ಧ, ಶ್ರಿಕೃಷ್ಣ, ಯೇಸು ಕ್ರಿಸ್ತ ಕೂಡ ಅಷ್ಟೇ ದೂರ ಮತ್ತು ಹತ್ತಿರ. ಹಾಗೆಯೇ, `ಇವತ್ತು ಗಾಂಧಿ ನಮಗೆ ಪ್ರಸ್ತುತ'  ಎನ್ನುವ ಅನವರತ ಮಾತಿನಂತೆ, ಜರಾತುಷ್ಟ್ರನ `ಗಾಥಾ'ದಲ್ಲಿರುವ ವಿಚಾರಗಳನ್ನು ಓದಿದರೆ  ಜರಾತುಷ್ಟ್ರ ಕೂಡ ನಮಗೆ ಅನವರತ ಪ್ರಸ್ತುತ ಎನ್ನಬಹುದಾಗಿದೆ.

ಯಾವುದೇ ಲೆಕ್ಕಾಚಾರದ ಪ್ರಕಾರ ಜರಾತುಷ್ಟ್ರನ ಮತ್ತು ಅವನ ತತ್ವ ದರ್ಶನದ ಕಾಲ ಯೇಸು ಕ್ರಿಸ್ತ ಮತ್ತು ಬೈಬಲಿಗಿಂತಲೂ ಹಿಂದಿನದು ಎಂಬ ವಿಚಾರವೇ ಯಾರನ್ನಾದರೂ ಚೋದ್ಯಕ್ಕೆ ಗುರಿ ಮಾಡುತ್ತದೆ. ದರ್ಶನ ಅಥವಾ ತತ್ವಶಾಸ್ತ್ರ, ಅಥವಾ ದಿನ ಬಳಕೆಯ ಸುಲಭ ಶಬ್ದದಲ್ಲಿ ಹೇಳುವುದಾದರೆ `ವಿಚಾರ'  ಎಷ್ಟು ಪುರಾತನ ಕಾಲದಿಂದ ಹರಿದು ಬಂದಿದೆ ಎಂದರೆ, `ಇದು ನನ್ನ ವಿಚಾರ' ಎನ್ನುವುದಕ್ಕೆ  ಏನಾದರೂ ಅರ್ಥವಿದೆಯೆ ಎಂಬ ಪ್ರಶ್ನೆ ಏಳುತ್ತದೆ.

ಜರಾತುಷ್ಟ್ರನ `ಗಾಥಾ' ದಲ್ಲಿರುವ ವಿಚಾರಗಳೆಲ್ಲವೂ ಅವನೊಬ್ಬನ ತಲೆಯಲ್ಲಿ ಮೂಡಿದ ವಿಚಾರಗಳು ಅರ್ಥಾತ್ ಅವನದೇ ದರ್ಶನ ಎನ್ನಲಾಗದು. ಅದು ಗ್ರಂಥವಾಗಿ ಕ್ರೋಡೀಕೃತವಾದ ದೀರ್ಘ ಅವಧಿಯಲ್ಲಿ ಹಲವಾರು ತಲೆಗಳು ಅದರಲ್ಲಿ ಕೆಲಸ ಮಾಡಿರಬಹುದು ಎಂದು ನಾವು ಸುಲಭದಲ್ಲಿ ಊಹಿಸಬಹುದಾಗಿದೆ. ಇದು ನಮ್ಮ ಎಲ್ಲಾ ಪುರಾಣ, ಪೌರಾಣಿಕ ಗ್ರಂಥ, ಬೈಬಲ್, ಕುರಾನ್ ಮತ್ತು ಅದಕ್ಕೂ ಹಿಂದಿನ ಎಲ್ಲಾ ಬರಹಕ್ಕೆ ಮತ್ತು ಅನಂತರ ಆಧುನಿಕ `ಪೇಪರ್ ಬುಕ್'  ಹುಟ್ಟುವ ಹಿಂದಿನ ಕಾಲದ್ದಾದ ಷೇಕ್ಸ್‌ಪಿಯರ್, ಅರಿಸ್ಟಾಟಲ್, ಪ್ಲೇಟೊ, ಸಾಕ್ರಟೀಸ್ ಮುಂತಾದವರ ದರ್ಶನ ಮತ್ತು ಬರಹಗಳ ವಿಚಾರಕ್ಕೆ ಕೂಡ ಅನ್ವಯಿಸುವ ಮಾತಾಗಿದೆ.

`ದಸ್ ಸ್ಪೇಕ್ ಜರಾತುಷ್ಟ್ರ' ಎಂಬುದು ಜರಾತುಷ್ಟ್ರನ ತತ್ವ ದರ್ಶನ ವಿಚಾರಗಳನ್ನು ನೀಡುವ ಜಗತ್ಪ್ರಸಿದ್ಧ ಗ್ರಂಥ. ಅದರ ಮೂಲ ಜರಾತುಷ್ಟ್ರನೇ ಹೇಳಿದ್ದು ಅಥವಾ ಬರೆದಿರಿಸಿದ್ದು ಎಂದು ನಂಬಲ್ಪಡುವ `ಗಾಥಾಗಳು' . `ದಸ್ ಸ್ಪೇಕ್ ಜರಾತುಷ್ಟ್ರ'  ಮೊದಲ ಬಾರಿಗೆ ಜರ್ಮನ್ ಭಾಷೆಯಲ್ಲಿ ಫ್ರೆಡ್ರಿಕ್ ನೀತ್ಸೆಯ ಲೇಖನಿಯಲ್ಲಿ ಮೂಡಿಬಂತು. ಅನಂತರದ ಕಾಲದಲ್ಲಿ ಈ ಗ್ರಂಥದ ಇಂಗ್ಲಿಷ್ ಭಾಷಾಂತರವು ಸುಮಾರು ನಲ್ವತ್ತು ವರ್ಷಗಳ ಬಳಿಕ  `ದಸ್ ಸ್ಪೋಕ್ ಜರಾತುಷ್ಟ್ರ' ಎಂಬ ಶೀರ್ಷಿಕೆಯಲ್ಲಿ ಹೊರಬಂತು.

ಪ್ರವಾದಿ ಮೋಸೆಸ್ ಪರ್ವತಾಗ್ರದಿಂದ ಕೆಳಗಿಳಿದು ಬಂದು ನೀಡಿದ `ಟೆನ್ ಕಮಾಂಡ್‌ಮೆಂಟ್ಸ್'  ಮಾದರಿಯಲ್ಲಿ ಜರಾತುಷ್ಟ್ರನೆಂಬ ಪರ್ಷಿಯನ್ ಪ್ರವಾದಿ ಪರ್ವತದಿಂದ ಕೆಳಗಿಳಿದು ಬಂದು ಆಡಿದ ನುಡಿಗಳಲ್ಲಿ ಬಂದಿರುವಂತೆ ಫ್ರೆಡ್ರಿಕ್ ನೀತ್ಸೆ ಸಾದರ ಪಡಿಸಿರುವ `ದಸ್ ಸ್ಪೋಕ್ ಜರಾತುಷ್ಟ್ರ'  ಗ್ರಂಥದೊಳಗೆ  `ಗಾಡ್ ಈಸ್ ಡೆಡ್'  ಎಂಬ ಮಾತು ಇತ್ತು. ಈ ಮಾತು ಅನಂತರದ ದಿನಗಳಲ್ಲಿ ಬಹಳ ವಿವಾದಾತ್ಮಕವಾಗಿ ಪ್ರಸಿದ್ಧವಾಯಿತು. ಜರಾತುಷ್ಟ್ರನ ತತ್ವದರ್ಶನ ವಿಚಾರಗಳ ಮಹಾ ಪರ್ವತ ರಾಶಿಯಿಂದ ಬಹಳ ಶ್ರಮದಿಂದ ತಯಾರಾದ ಈ ಕೃತಿಯು ತತ್ವಶಾಸ್ತ್ರಜ್ಞನೂ, ಮನೋಶಾಸ್ತ್ರಜ್ಞನೂ, ಕವಿಯೂ, ಲೇಖಕನೂ ಆದ ಫ್ರೆಡ್ರಿಕ್ ನೀತ್ಸೆಯ ಮಾಸ್ಟರ್ ಪೀಸ್ ಎನಿಸಿಕೊಂಡಿದೆ.

ಆದರೆ ಈ ಗ್ರಂಥ ಆಗ ಬಹುಮಂದಿಯ ಗಮನವನ್ನು ಸೆಳೆಯಲಿಲ್ಲ. ಅದು ಜಗತ್ಪ್ರಸಿದ್ಧವಾದದ್ದು ನೀತ್ಸೆಯ ಮರಣದ ನಂತರ. `ದಸ್ ಸ್ಪೇಕ್  ಜರಾತುಷ್ಟ್ರ'  ಜರಾತುಷ್ಟ್ರನ ಮಾತಿನಲ್ಲಿ ಅವನೇ ಹೇಳಿದಂತೆ ಬರೆಯಲ್ಪಟ್ಟಿದೆ. ಇದು ಕೇವಲ ತತ್ವಶಾಸ್ತ್ರೀಯ ಕೃತಿಯಾಗಿರದೆ ಶ್ರೇಷ್ಠ ಸಾಹಿತ್ಯ ಕೃತಿ ಎಂಬ ಖ್ಯಾತಿಯನ್ನು ಗಳಿಸಿದೆ. ತತ್ವ ವಿಚಾರಗಳಷ್ಟೇ ಅಲ್ಲ ಉತ್ತಮ ಗದ್ಯ, ಪದ್ಯ, ಕಥೆ, ಕಾವ್ಯ ಮುಂತಾದ್ದು ಕೂಡ ಈ ಗ್ರಂಥದಲ್ಲಿ ವಿಪುಲವಾಗಿದೆ. ಜರಾತುಸ್ತ್ರನ ದನಿಯಲ್ಲಿದೆ ಎಂಬ ಇಂಗಿತವಿರುವ ಪುಸ್ತಕದ ಶೀರ್ಷಿಕೆಯು ಇತರ ಭಾಷೆಯ ಅನುವಾದಗಳಲ್ಲಿ ಕೂಡ ಅದೇ ಶೀರ್ಷಿಕೆಯಲ್ಲಿ ಕಾಣಿಸಿಕೊಂಡಿದೆ.

ಅಲೆಕ್ಸಾಂಡರ್ ಅಖೀಮೆನಿಡ್ ಸಾಮ್ರೋಜ್ಯವನ್ನು ವಶಪಡಿಸಿಕೊಂಡದ್ದು ಕ್ರಿಸ್ತಪೂರ್ವ 330ರಲ್ಲಿ. ಅಲೆಕ್ಸಾಂಡರ್ ಶಕವನ್ನು ಆರಂಭಿಸಬೇಕೆಂದು ಅಲೆಕ್ಸಾಂಡರನ ನಂತರದ ಅರಸರ ಪ್ರಯತ್ನಕ್ಕೆ ವಿರುದ್ಧವಾಗಿ ಜೊರಾಸ್ಟ್ರಿಯನಿಸಮ್ ಪಾದ್ರಿಗಳು ಜೊರಾಸ್ಟರ್ ಅಲೆಕ್ಸಾಂಡರನಿಂದ 258 ವರ್ಷಗಳ ಹಿಂದೆ ಬದುಕಿದ್ದ ಎಂಬ ವಾದವನ್ನು ಮಂಡಿಸಿದರು.

ಆದರೆ ಇರಾನಿಯರು ಜೊರಾಸ್ಟರನ ಕಾಲ ಕ್ರಿಸ್ತಪೂರ್ವ 11ರಿಂದ 10ನೇ ಶತಮಾನ ಎಂದೇ ನಂಬುತ್ತಾರೆ. ಅಂದಿನ ಸಮಾಜದಲ್ಲಿ ಸಾಮ್ರೋಜ್ಯಗಳು, ರಾಜರು, ಆಡಳಿತ ಮುಂತಾದ್ದು ಇರಲಿಲ್ಲ. ಭಾಗಶಃ ಅಲೆಮಾರಿಗಳಾಗಿದ್ದ ಜನರಲ್ಲಿ ಸಾಮಾನ್ಯ ಪ್ರಜೆಗಳಲ್ಲದವರೆಂದರೆ, ಹಿರಿಯರು, ಪಾದ್ರಿಗಳು, ಸೈನಿಕರು ಮತ್ತು ಕೃಷಿಕರು. ೊರಾಸ್ಟರ್ ಅವರಲ್ಲೊಬ್ಬ ಪಾದ್ರಿಯಾಗಿದ್ದ ಎಂದು ತಿಳಿಯಬಹುದಾಗಿದೆ. ಯಾವ ವಾದವೂ ಯಾವ ಕಾಲದಲ್ಲೂ ಯಾರಿಂದಲೂ ಪೂರ್ಣವಾಗಿ ಸ್ವೀಕೃತವಾಗಿಲ್ಲ.

ಜರಾತುಷ್ಟ್ರನನ್ನು ಒಂದು ಕಾಲದಲ್ಲಿ ನಿಜವಾಗಿಯೂ ಜೀವಿಸಿದ್ದ ಮನುಷ್ಯ. ಯಾವುದೋ ಕಪೋಲಕಲ್ಪಿತ ಕಥಾ ಸೃಷ್ಟಿಯಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಲು ಆತನ ಬದುಕಿನ ಕುರಿತಾಗಿ ಬರೆಯಲ್ಪಟ್ಟ ವಿವರಗಳನ್ನು ನಾವು ಪಡೆಯಬೇಕು. ಆಗ ನಮಗೆ ಅವನು ಎಷ್ಟು ಹತ್ತಿರ, ಎಷ್ಟರ ಮಟ್ಟಿಗೆ ಆತ ನಮ್ಮಂತೆ ಇದ್ದ ಎಂದು ಅರಿವಾಗುತ್ತದೆ.

ಜರಾತುಷ್ಟ್ರ ಪಾದ್ರಿ ಕುಟುಂಬದಲ್ಲಿ ಜನಿಸಿದ ಎಂದು `ಗಾಥಾಗಳು' ಹೇಳುತ್ತವೆ. ಅವನ ತಂದೆಯ ಹೆಸರು ಪೋರುಸಾಸ್ಪ. ತಾಯಿಯ ಹೆಸರು ದುಯೂವ. ಹೆಂಡತಿಯ ಹೆಸರು ಹ್ವಾವಿ. ಜರಾತುಷ್ಟ್ರನಿಗೆ ಮೂರು ಗಂಡು ಮಕ್ಕಳು ಇಸತ್ ವಸ್ತರ್, ಉರುವತ್ ನರ, ಮತ್ತು ಹ್ವಾರೆ ಸಿಯರ. ಮೂರು ಹೆಣ್ಣು ಮಕ್ಕಳು ಫ್ರೆನಿ, ಪೋರುಸಿಸ್ತ, ಮತ್ತು ಟ್ರಿಟಿ. ಮೊಟ್ಟ ಮೊದಲು ಜೊರಾಸ್ಟ್ರಿಯನಿಸಮ್‌ಅನ್ನು ಸ್ವೀಕರಿಸಿದ್ದು ಜರಾತುಷ್ಟ್ರನ ಹೆಂಡತಿ ಮಕ್ಕಳು. ಜರಾತುಷ್ಟ್ರನ ಮರಣದ ಬಗ್ಗೆ `ಗಾಥಾಗಳು' ಏನೂ ಹೇಳುವುದಿಲ್ಲ.  ಜರಾತುಷ್ಟ್ರ ವಾಸವಾಗಿದ್ದ ಬಾಲ್ಕ್ ಪ್ರಾಂತವನ್ನು ಆಕ್ರಮಿಸಿ ವಶಪಡಿಸಿಕೊಂಡ ಟ್ಯುರೇನಿಯನರು ಆತನನ್ನು ಬಲಿಕಂಬಕ್ಕೆ ಏರಿಸಿ ಅವನನ್ನು ಕೊಂದರು ಎಂದು ಶಹನಾಮೆ ಎಂಬ ಬರಹ ಹೇಳುತ್ತದೆ.

ಮನುಷ್ಯನ ಸ್ಥಿತಿಯು ಸತ್ಯ ಮತ್ತು ಸುಳ್ಳಿನ ಮಿಥ್ಯೆಯ ನಡುವಣ ಸಂಘರ್ಷವನ್ನೊಳಗೊಂಡಿದೆ ಎಂದು ಜರಾತುಷ್ಟ್ರತನ `ಗಾಥಾ'ದಲ್ಲಿ ಹೇಳುತ್ತಾನೆ. ಇದು ಜೊರಾಸ್ಟ್ರಿಯನಿಸಮಿನ ಮೂಲ ತತ್ವವಾಗಿದೆ. ಸತ್ಯವೇ ದೈವ, ಸತ್ಯವೆಂದರೆ ಸೃಷ್ಟಿ, ಸತ್ಯ ನಮ್ಮ ಅಸ್ತಿತ್ವ, ಸತ್ಯವೆಂದರೆ ಸ್ವತಂತ್ರ ಚಿಂತನೆ ಎಂದು ಜೊರಾಸ್ಟ್ರಿಯನಿಸಮ್ ಪ್ರತಿಪಾದಿಸುತ್ತದೆ. 

ಜರಾತುಷ್ಟ್ರನ `ಗಾಥಾ'ಗಳಲ್ಲಿರುವುದನ್ನು ಅವನ ನಂತರದ ಕಾಲದಲ್ಲಿ ಯಾರಿಂದಲೂ ಸರಿಯಾಗಿ ಭಾಷಾಂತರಿಸಲು ಆಗಿಲ್ಲ. ಆದರೆ ಜೂಡಾಯಿಸಮ್ ಮತ್ತು ಪ್ಲೆಟೋನಿಸಮ್‌ನ ಮೇಲೆ  ಜೊರಾಸ್ಟ್ರಿಯನಿಸ್‌ಮ್‌ನ ಗಾಢವಾದ ಪ್ರಭಾವವನ್ನು ಗುರುತಿಸಬಹುದಾಗಿದೆ. ಗ್ರೀಕ್ ತತ್ವಜ್ಞಾನಿ ಹೆರಾಕ್ಲಿಟಸನು ಜೊರಾಸ್ಟ್ರಿಯನಿಸ್‌ಮ್‌ನಿಂದ ಪ್ರಭಾವಿತನಾಗಿದ್ದ.

ಜೊರಾಸ್ಟ್ರಿಯನಿಸಮ್ ಧಾರ್ಮಿಕ ತತ್ವಶಾಸ್ತ್ರಕ್ಕೆ ಬಹಳ ಮುಖ್ಯವಾದ ಕೊಡುಗೆಯಾಗಿದೆ ಎಂದು ತಿಳಿಯಲ್ಪಡುತ್ತದೆ. ಜರಾತುಷ್ಟ್ರನ ಚಿತ್ರಗಳಲ್ಲಿ ಅವನು ಯಾವಾಗಲೂ ಬಿಳಿ ನಿಲುವಂಗಿಯಲ್ಲಿರುವುದು, ಉದ್ದನೆ ದಾಡಿಯಿರುವುದು  ಮತ್ತು ಬಹು ಮಟ್ಟಿಗೆ ಜೀಸಸ್ ಕ್ರೈಸ್ಟ್‌ನನ್ನು ಹೋಲುವುದು ಕಂಡು ಬರುತ್ತದೆ. ಬೈಬಲಿನಲ್ಲಿ `ಗಾಥಾ' ದ ಬಹಳ ಅಂಶಗಳು ಸೇರಿಕೊಂಡಿರಬಹುದು ಎಂದರೆ ತಪ್ಪಾಗಲಾರದು.

ಆ ಕಾಲದಲ್ಲಿ, ಒಬ್ಬ ವ್ಯಕ್ತಿ ಸಾಮಾನ್ಯ ಮನುಷ್ಯನ ಬುದ್ಧಿಶಕಿಗೆ ನಿಲುಕದ್ದೇನನ್ನಾದರೂ  ಮಾಡಿದರೆ ಅವನನ್ನು ಐಂದ್ರಜಾಲಿಕ ಅಥವಾ ಪವಾಡ ಪುರುಷ ಎಂದು ಭಾವಿಸಲಾಗುತ್ತಿತ್ತು. ಜೀಸಸ್ ಕ್ರೈಸ್ಟ್ ಬಗ್ಗೆ ಜನರಲ್ಲಿ ಈ ಭಾವನೆಯಿತ್ತು.

ಸ್ವಾಭಾವಿಕವಾಗಿಯೇ ಅದಕ್ಕಿಂತ ಬಹಳ ಹಿಂದಿನ ಕಾಲದಲ್ಲಿದ್ದ ಜರಾತುಷ್ಟ್ರನ ಬಗ್ಗೆ ಜನರಿಗೆ ಆ ಭಾವನೆಯಿತ್ತು. ಜೀಸಸ್, ಮೋಸೆಸ್ ಮುಂತಾದವರಿಗಿದ್ದಂತೆಯೇ ಜರಾತುಷ್ಟ್ರನ ಮಾತಿಗೂ ಜನರನ್ನು ಮೋಡಿ ಮಾಡುವ ಶಕ್ತಿಯಿತ್ತು ಎಂದು ತರ್ಕಿಸಬಹುದಾಗಿದೆ. `ಜರಾತುಷ್ಟ್ರ ಹೀಗೆಂದ' ಅಂದರೆ ಅದು ವಿಶೇಷವಾದ ಒಂದು ಮಾತು ಎಂದೇ ತಿಳಿಯಲಾಗುತ್ತಿತ್ತು.

ಅಹಮ್ಮದೀಯ ಮುಸ್ಲಿಮರು ಜರಾತುಷ್ಟ್ರ ನನ್ನು  ಪ್ರವಾದಿಯೆಂದು ಪರಿಭಾವಿಸುತ್ತಾರೆ. ಬಹಾಯಿ ಪಂಥಸ್ಥರು ಜರಾತುಷ್ಟ್ರನನ್ನು ಅಬ್ರಹಾಮ್, ಮೋಸೆಸ್, ಗೌತಮ ಬುದ್ಧ, ಕೃಷ್ಣ, ಜೀಸಸ್ ಕ್ರೈಸ್ಟ್ ಮತ್ತು ಪ್ರವಾದಿ ಮಹಮ್ಮದರನ್ನು ಸಮಾನವಾಗಿ ಮಹಾಪುರುಷರಾಗಿ ಕಾಣುತ್ತಾರೆ. ಜರಾತುಷ್ಟ್ರನ ಬೃಹತ್ತಾದ ಗಾಥಾ ಗ್ರಂಥದಲ್ಲಿರುವ ಕೆಲವು ಮಾತುಗಳು ಹೀಗಿವೆ:

``ನಾನು ನಿನಗೆ ಮಹಾ ಮಾನವನಾಗಲು ಕಲಿಸಿಕೊಡುತ್ತೇನೆ. ಮನುಷ್ಯನನ್ನು ನೀನು ಮೀರಲೇ ಬೇಕು.”
``ಎಲ್ಲಾ ಜೀವರು ತಮ್ಮನ್ನು ಮೀರುವ ಏನಾದರೊಂದನ್ನು ಮಾಡಿದ್ದಾರೆ. ನೀನು ಈ ಉಬ್ಬರದ ತೆರೆಯ ಮೇಲೆ ತೇಲುತ್ತಿರುವೆಯಾ, ಅಥವಾ ಮರಳಿ ಕಾನನದ ಮೃಗವಾಗುವೆಯಾ? ಮಹಾ ಮಾನವನಿಗೆ `ಕೇವಲ ಮನುಷ್ಯ' ಏನು?

ಬರೀ ಏಪ್ ಅಷ್ಟೆ. ಅಂದರೆ ಒಂದು ಕಿರಿಕಿರಿ ಉಂಟು ಮಾಡುವ ಹಾಸ್ಯಾಸ್ಪದ ಪ್ರಾಣಿ. ಮಹಾ ಮಾನವನ ದೃಷ್ಟಿಯಲ್ಲಿ `ಕೇವಲ ಮನುಷ್ಯ  ಕೂಡ ಅಷ್ಟೆ: ಕಂಡರೇನೇ ಕಿರಿಕಿರಿಯಾಗುವ ಒಂದು ಹಾಸ್ಯಾಸ್ಪದವಾದ ಪ್ರಾಣಿ. ನೀನು ಹುಳದ ಅವಸ್ಥೆಯಿಂದ ಮಾನವನ ಸ್ಥಿತಿಗೆ ಬಂದಿರುವೆ. ಆದರೂ ನಿನ್ನಲ್ಲಿರುವುದರಲ್ಲಿ ಒಂದಷ್ಟು `ಹುಳ'ವೆ ಆಗಿದೆ.
 
``ನಿಮ್ಮ ನಡುವಿರುವ ಅತ್ಯಂತ ಬುದ್ಧಿವಂತ ಮನುಷ್ಯ ಕೂಡ ಸಸ್ಯ ಮತ್ತು ಪ್ರೇತದ ಸಂಕರ. ನಾನು ಏನು ಹೇಳಿದೆ? ಸಸ್ಯ ಅಥವಾ ಪ್ರೇತ ಆಗು ಎಂದು ಹೇಳಿದೆನೆ?”  ``ನಿನ್ನ ಅಂತಃಶಕ್ತಿ ನುಡಿಯಲಿ: ಮಾಹಾಮಾನವನೇ ಈ ಜಗತ್ತು; ಜಗತ್ತೇ ಮಹಾಮಾನವ.”

ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ, ನನ್ನ ಸಹೋದರರೆ, ಜಗತ್ತಿಗೆ ವಿಧೇಯರಾಗಿರಿ. ಬೇರೆ ಲೋಕದ ವಿಚಾರಗಳನ್ನು ಹೇಳುವವರ ಮೇಲೆ ಭರವಸೆ ಇಡಬೇಡಿರಿ. ಅವರಿಗೆ ಗೊತ್ತಿದೆಯೋ ಇಲ್ಲವೋ ಅವರು ಆಹಾರದಲ್ಲಿ ವಿಷ ಕಲಸುತ್ತಾರೆ. ಅವರು ಕೊಳೆಯುತ್ತಾ ವಿಷವುಣ್ಣುತ್ತಾ ಬದುಕನ್ನು ನಿರಾಕರಿಸುವವರು! ಅವರಿಗೆ ಭೂಮಿ ಭಾರವಾಗಿದೆ! ಅವರು ತೊಲಗಲಿ! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT