ಬೆಳಗಾವಿ: ಕುಡಿಯುವ ನೀರು, ನೀರಾವರಿ, ವಿದ್ಯುತ್ ಉತ್ಪಾದನೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ನಿರ್ಮಿಸಲಾಗಿರುವ ರಾಜ್ಯದ ಪ್ರಮುಖ ಜಲಾಶಯಗಳು ಹೂಳಿನ ಸಮಸ್ಯೆಯನ್ನು ಎದುರಿಸುತ್ತಿವೆ. ಇದರಿಂದಾಗಿ ಅವುಗಳ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗುತ್ತಿವೆ.
ವಿಧಾನಮಂಡಲದ ಪ್ರಸಕ್ತ ಅಧಿವೇಶನದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ನೀಡಿರುವ, ರಾಜ್ಯದ ವಿವಿಧ ಜಲಾಶಯಗಳಲ್ಲಿ ಶೇಖರಣೆಯಾಗಿರುವ ಹೂಳಿನ ಪ್ರಮಾಣದ ಮಾಹಿತಿಯನ್ನು ಅವಲೋಕಿಸಿದರೆ ಈ ವಿಷಯ ಸ್ಪಷ್ಟವಾಗುತ್ತದೆ. ನೀರಾವರಿ ಯೋಜನೆ(ದೊಡ್ಡ ಮತ್ತು ಚಿಕ್ಕ ಪ್ರಮಾಣದ್ದು) ಉದ್ದೇಶಗಳಿಗೆ ನಿರ್ಮಿಸಲಾಗಿರುವ 57 ಜಲಾಶಯಗಳ ಪೈಕಿ 14ರಲ್ಲಿ ಹೂಳಿನ ಸಮಸ್ಯೆ ಇದೆ. ಇವುಗಳಲ್ಲಿ ಕೆಲವು ಜಲಾಶಯಗಳಲ್ಲಿನ ಸಮಸ್ಯೆ ಗಂಭೀರ ಸ್ವರೂಪದ್ದಾಗಿದೆ.
ತುಂಗಭದ್ರೆಗೆ ಮೊದಲ ಸ್ಥಾನ: ಹೂಳಿನ ಸಮಸ್ಯೆ ಎದುರಿಸುತ್ತಿರುವ ಜಲಾಶಯಗಳ ಪಟ್ಟಿಯಲ್ಲಿ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಮೊದಲ ಸ್ಥಾನ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಅಂದಾಜು 12 ಲಕ್ಷ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಉದ್ದೇಶದಿಂದ ನಿರ್ಮಿಸಲಾಗಿರುವ ಈ ಜಲಾಶಯದಲ್ಲಿ ಬರೋಬ್ಬರಿ 31.616 ಟಿಎಂಸಿ ಅಡಿ ಹೂಳಿದೆ. 1953ರಲ್ಲಿ ಬಳಕೆಗೆ ಮುಕ್ತವಾದಾಗ 133 ಟಿಎಂಸಿ ಅಡಿಗಳಷ್ಟು ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದ ಈ ಜಲಾಶಯದಲ್ಲಿ ಈಗ ಕೇವಲ 100.855 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತಿದೆಯಷ್ಟೇ.
ಯಾದಗಿರಿ ಜಿಲ್ಲೆಯಲ್ಲಿರುವ ನಾರಾಯಣಪುರ ಜಲಾಶಯದಲ್ಲಿ 10 ಟಿಎಂಸಿ ಅಡಿಗಳಷ್ಟು ಕೆಸರು ಮಣ್ಣು ತುಂಬಿದೆ. ಸದ್ಯ ಇದರ ನೀರಿನ ಸಂಗ್ರಹ ಸಾಮರ್ಥ್ಯ 32.313 ಟಿಎಂಸಿ ಅಡಿ.
ಕೃಷ್ಣೆಯ ಮಡಿಲಲ್ಲೂ: ಉತ್ತರ ಕರ್ನಾಟಕ ಜನರ ಜೀವನಾಡಿಯಾಗಿರುವ ಆಲಮಟ್ಟಿ ಜಲಾಶಯವೂ ಈ ಸಮಸ್ಯೆಯಿಂದ ಹೊರತಾಗಿಲ್ಲ. 123.081 ಟಿಎಂಸಿ ಅಡಿಗಳಷ್ಟು ನೀರನ್ನು ಹಿಡಿದಿಡುವ ತಾಕತ್ತಿರುವ ಈ ಜಲಾಶಯದ ತಳದಲ್ಲಿ 5 ಟಿಎಂಸಿ ಅಡಿಗಳಷ್ಟು ಹೂಳು ಕೂತಿದೆ. ಮುಂದಿನ ಕೆಲವು ವರ್ಷಗಳಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂಬ ಆತಂಕ ಈ ಭಾಗದ ಜನರದ್ದು. 49.5 ಟಿಎಂಸಿ ನೀರು ಅಡಿಯಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯದಲ್ಲೂ ಮೂರು ಟಿಎಂಸಿ ಅಡಿ ಹೂಳಿದೆ.
ಹೂಳು ತೆರವು ಸವಾಲು: ಜಲಾಶಯಗಳಲ್ಲಿ ತುಂಬಿರುವ ಹೂಳನ್ನು ತೆಗೆಯುವುದು ಬಹು ದೊಡ್ಡ ಸವಾಲು. ತುಂಗಭದ್ರಾ ಜಲಾಶಯದಲ್ಲಿ ಶೇಖರವಾಗಿರುವ ಭಾರಿ ಪ್ರಮಾಣದ ಹೂಳನ್ನು ತೆಗೆಯುವ ಬಗ್ಗೆ ರಾಜ್ಯ ಸರ್ಕಾರ ಹಲವು ವರ್ಷಗಳಿಂದ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಅಧ್ಯಯನವನ್ನೂ ನಡೆಸಿದೆ. ಕೆಲವು ಖಾಸಗಿ ಕಂಪೆನಿಗಳ ಸಹಕಾರವನ್ನು ಈ ಹಿಂದೆ ಕೇಳಿತ್ತು. ಆದರೆ, ಪ್ರಾಯೋಗಿಕವಾಗಿ ಇದು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಅದೇ ಕಾರಣಕ್ಕೆ ಯಾವ ಕಂಪೆನಿಗಳೂ ಮುಂದೆ ಬರುತ್ತಿಲ್ಲ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಆದರೂ, ರಾಜ್ಯ ಸರ್ಕಾರ ಈ ಯೋಚನೆ ಕೈ ಬಿಟ್ಟಿಲ್ಲ. ಜಲಾಶಯದ ಸಂಗ್ರಹಣಾ ಸಮಾರ್ಥ್ಯವನ್ನು ಮರುಸ್ಥಾಪಿಸಲು ಪರ್ಯಾಯ ತಾಂತ್ರಿಕ ಪರಿಹಾರಗಳನ್ನು ಒದಗಿಸಲು ಮತ್ತು ಪರ್ಯಾಯ ಪ್ರಸ್ತಾವನೆಗಳ ವಿವರವಾದ ಯೋಜನಾ ವರದಿಯನ್ನು ತಯಾರಿಸಲು ಜಾಗತಿಕ ಮಟ್ಟದ ಕಂಪನಿಗಳಿಗೆ ಆಹ್ವಾನಿಸಲಾಗಿದೆ ಎಂದು ಎಂ.ಬಿ. ಪಾಟೀಲ ಹೇಳಿದ್ದಾರೆ.
ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದ ಅವರು, ಒಂದು ವೇಳೆ ತುಂಗಭದ್ರಾ ಜಲಾಶಯದಿಂದ ಹೂಳನ್ನು ತೆಗೆದರೆ ಅದನ್ನು ಹಾಕಲು 60 ಸಾವಿರ ಎಕರೆ ಜಮೀನು ಬೇಕು ಎಂದು ಹೇಳಿದ್ದರು.
ಪರ್ಯಾಯ ಮಾರ್ಗ ಅಗತ್ಯ: ಜಲಾಶಯಗಳಲ್ಲಿ ಹೂಳು ತುಂಬುವುದು ಸಹಜ. ಸಣ್ಣ ಪ್ರಮಾಣದಲ್ಲಿ ಹೂಳಿದ್ದರೆ ತೆರವುಗೊಳಿಸಬಹುದು. ಆದರೆ, ಭಾರಿ ಪ್ರಮಾಣದಲ್ಲಿದ್ದರೆ ಅದಕ್ಕೆ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ಜೊತೆಗೆ ಹೂಳು ಹಾಕಲು ನೂರಾರು ಎಕರೆ ಜಮೀನೂ ಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ಖರ್ಚು ಮಾಡುವ ವೆಚ್ಚದಲ್ಲಿ ಹೊಸ ಅಣೆಕಟ್ಟೆಯನ್ನೇ ನಿರ್ಮಿಸ-ಬಹುದು ಎಂಬ ಸಲಹೆಯನ್ನೂ ಅವರು ನೀಡುತ್ತಾರೆ.
ಹಾಗಾಗಿ, ಹೂಳಿನ ಕಾರಣದಿಂದಾಗಿ ಜಲಾಶಯದಿಂದ ಹೋಗುವ ನೀರನ್ನು ಸಂಗ್ರಹಿಸಲು ಸಣ್ಣ ಅಣೆಕಟ್ಟೆಗಳನ್ನು ನಿರ್ಮಿಸುವುದು, ಜಲಾಶಯದಲ್ಲಿ ಹೂಳು ತುಂಬುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ನದಿ ಪಾತ್ರದಲ್ಲಿ ಗಿಡಗಳನ್ನು ನೆಡುವುದು (ಇದರಿಂದ ಮಣ್ಣಿನ ಸವೆತ ಅಥವಾ ಕೊರೆತ ನಿಯಂತ್ರಿಸಬಹುದು) ಸೇರಿದಂತೆ ಇತರ ಪರ್ಯಾಯ ಮಾರ್ಗಗಳತ್ತ ಸರ್ಕಾರ ಚಿಂತಿಸುವ ಅಗತ್ಯ ಇದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.