ತಿಪಟೂರು: ನಮ್ಮ ದೇಶದ ಶ್ರೇಷ್ಠ ಮೌಲ್ಯ, ಆಚಾರವಿಚಾರ, ಜೀವನ ಪದ್ಧತಿಗಳು ಯಾವುದೇ ಆಕ್ರಮಣದಿಂದ ನಶಿಸಿ ಹೋಗದಂತೆ ಪ್ರಭಾವಿಸಿರುವ ಮಹನೀಯರಿಂದ ಯುವ ಪೀಳಿಗೆ ಪ್ರೇರಣೆ ಪಡೆಯಬೇಕಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದರು.ತಾಲ್ಲೂಕಿನ ರಂಗಾಪುರದ ಗುರುಪರದೇಶಿ ಕೇಂದ್ರದಲ್ಲಿ ಬುಧವಾರ ನಡೆದ ಗುರು ಸಪ್ತಾಹ ಮತ್ತು ಮಠದ ಆರನೆ ಸ್ವಾಮೀಜಿಯವರ ಮೂರ್ತಿ ಪ್ರತಿಷ್ಠಾಪನೆಯ ಹತ್ತನೇ ವಾರ್ಷಿಕ ಮಹೋತ್ಸವ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಗುರುಭಕ್ತ ಶಿರೋಮಣಿ ದಿ. ಬಿ.ಕೆ. ರಾಮನಾರಾಯಣಸಿಂಗ್ ಅವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.
ಈಚಿಪ್ಟ್, ಚೀನಾ, ರೋಮ್ ಮೊದಲಾದ ಕಡೆ ಅಲ್ಲಿನ ದೇಸಿ ವಿಶಿಷ್ಟತೆಗಳು ಮರೆಯಾಗಿವೆ. ಆದರೆ ಭಾರತ 1000ಕ್ಕೂ ಹೆಚ್ಚು ವರ್ಷ ವಿದೇಶಿಯರ ಆಕ್ರಮಣಕ್ಕೆ ಒಳಗಾಗಿದ್ದರೂ ಈಗಲೂ ಸ್ವಂತ ಸತ್ವವನ್ನು ಉಳಿಸಿಕೊಂಡಿದೆ. ದೇಶದ ಸಾಮಾಜಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟು ಅಲುಗಾಡದಿರಲು ಧರ್ಮ ಕೇಂದ್ರಗಳು ಕಾರಣವಾಗಿವೆ. ಇಂತಹ ಬೇರುಗಳ ಮಹತ್ವವನ್ನು ಶಿಕ್ಷಣದ ಮೂಲಕ ಮಕ್ಕಳಿಗೆ ಮಟ್ಟಿಸಬೇಕಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಮಾತನಾಡಿ, ಜಾತ್ಯತೀತವಾಗಿ, ಪಕ್ಷಾತೀತವಾಗಿ ದೀನದಲಿತರಿಗೆ ಆಸರೆ ನೀಡಬಲ್ಲ ಮಠಮಾನ್ಯಗಳು ಮಾನವತೆಯ ಸಂಕೇತಗಳಾಗಿವೆ. ಶ್ರೇಷ್ಠ ದಾಸೋಹ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಗುರುಗಳು ಪವಿತ್ರ ಕೆಲಸ ಮಾಡುತ್ತಿದ್ದಾರೆ. ಯುವ ಪೀಳಿಗೆಯಲ್ಲಿ ಧಾರ್ಮಿಕ ಚಿಂತನೆ ಬಿತ್ತುತ್ತಿದ್ದಾರೆ ಎಂದರು.ಕೆರೆಗೋಡಿ ರಂಗಾಪುರ ಕೆರೆಗೆ ನೀರು ಹರಿಸುವ ಯೋಜನೆ ಶೀಘ್ರ ಕೈಗೂಡಲಿದೆ. ಮುಂದಿನ ವರ್ಷ ಈ ಕ್ಷೇತ್ರದಲ್ಲಿ ನಡೆಸಲು ಉದ್ದೇಶಿಸಿರುವ ಸಿದ್ದರಾಮ ಜಯಂತಿ ಸಂಬಂಧ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ತಿಳಿಸಿದರು. ಸಂಸದ ಜಿ.ಎಸ್. ಬಸವರಾಜು ಮಾತನಾಡಿದರು.
ಕೆರೆಗೋಡಿ ರಂಗಾಪುರ ಕ್ಷೇತ್ರದ ಗುರುಪರದೇಶಿಕೇಂದ್ರ ಸ್ವಾಮೀಜಿ, ಬೆಟ್ಟದಹಳ್ಳಿ ಗವಿ ಮಠಾಧ್ಯಕ್ಷರಾದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಶಾಸಕ ಬಿ.ಸಿ. ನಾಗೇಶ್, ನಟ ದೊಡ್ಡಣ್ಣ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸದಾಶಿವಯ್ಯ, ಪಿಡಡ್ಲ್ಯೂಡಿ ಮುಖ್ಯ ಎಂಜಿನಿಯರ್ ಮೃತ್ಯುಂಜಯಸ್ವಾಮಿ, ಉಪ ವಿಭಾಗಾಧಿಕಾರಿ ವೈ.ಎಸ್. ಪಾಟೀಲ್, ಮಾಜಿ ಶಾಸಕ ನಂಜೇಗೌಡ, ಹೀ.ಚಿ. ಶಾಂತವೀರಯ್ಯ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.