ಹೈದರಾಬಾದ್ (ಪಿಟಿಐ): ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲಿನಲ್ಲಿರುವ ಗಣಿ ದೊರೆ, ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸಿಬಿಐ ಕೋರ್ಟ್ ಶುಕ್ರವಾರ ಷರತ್ತುಬದ್ಧ ಜಾಮೀನು ನೀಡಿದೆ.
5 ಲಕ್ಷ ರೂಪಾಯಿ ಠೇವಣಿ ಹಾಗೂ ಅಷ್ಟೇ ಮೊತ್ತದ ಎರಡು ಭದ್ರತಾ ಠೇವಣಿಯೊಂದಿಗೆ ಜಾಮೀನು ಆದೇಶ ನೀಡಿದೆ.
ಕರ್ನಾಟಕದಲ್ಲಿನ ಇನ್ನೊಂದು ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಪ್ರಸ್ತುತ ಬೆಂಗಳೂರಿನ ಜೈಲಿನಲ್ಲಿ ಇದ್ದಾರೆ. ಹಾಗಾಗಿ ಜಾಮೀನು ಸಿಕ್ಕರೂ ಅವರು ತಕ್ಷಣವೇ ಬಿಡುಗಡೆಯಾಗುತ್ತಿಲ್ಲ.
ರೆಡ್ಡಿ, ಈ ಹಿಂದೆ ಐದು ಬಾರಿ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ವಿಚಾರಣಾ ನ್ಯಾಯಾಲಯ ಹಾಗೂ ರಾಜ್ಯ ಹೈಕೋರ್ಟ್ ತಿರಸ್ಕರಿಸಿದ್ದವು.
ಪಾಸ್ಪೋರ್ಟ್ಗಳನ್ನು ಒಪ್ಪಿಸುವಂತೆ, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಇತರ ಪ್ರಕರಣಗಳಲ್ಲಿ ಮೂಗು ತೂರಿಸದಂತೆ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರದಿರುವಂತೆ ರೆಡ್ಡಿ ಅವರಿಗೆ ಕೋರ್ಟ್ ತಾಕೀತು ಮಾಡಿದೆ.`ಅರ್ಜಿದಾರ (ಗಾಲಿ) ಬಳ್ಳಾರಿಯಲ್ಲಿ (ಕರ್ನಾಟಕ) ಇರುತ್ತಾರೆ. ಇತರ ಪ್ರಕರಣಗಳ ವಿಚಾರಣೆಗೆ ಬೆಂಗಳೂರಿಗೆ ತೆರಳಲು ಅವರಿಗೆ ಅನುಮತಿ ನೀಡಲಾಗಿದೆ~ ಎಂದು ನ್ಯಾಯಾಧೀಶರು ಹೇಳಿದರು.
ಜನಾರ್ದನ ರೆಡ್ಡಿ, ಅವರ ಭಾವ, ಒಎಂಸಿ ವ್ಯವಸ್ಥಾಪಕ ನಿರ್ದೇಶಕ ಬಿ.ವಿ.ಶ್ರೀನಿವಾಸ ರೆಡ್ಡಿ ಅವರನ್ನು ಕಳೆದ ಸೆಪ್ಟೆಂಬರ್ 5ರಂದು ಬಂಧಿಸಿ ಬಳ್ಳಾರಿಯಿಂದ ಹೈದರಾಬಾದ್ಗೆ ಕರೆತರಲಾಗಿತ್ತು. ಈ ಪ್ರಕರಣದಲ್ಲಿ ಸಿಬಿಐ ಡಿಸೆಂಬರ್ 3ರಂದು ಜನಾರ್ದನ ರೆಡ್ಡಿ ಹಾಗೂ ಇತರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಈ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ವೈ.ಶ್ರೀಲಕ್ಷ್ಮಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸಿಬಿಐ ಕೋರ್ಟ್ ತಿರಸ್ಕರಿಸಿದೆ.
ಕೈಗಾರಿಕಾ ಕಾರ್ಯದರ್ಶಿ ಶ್ರೀಲಕ್ಷ್ಮಿ, 2005ರಲ್ಲಿ ಗಣಿ ಗುತ್ತಿಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ.