ತಿರುವನಂತಪುರ(ಪಿಟಿಐ): ಪ್ರವಾಸಿ ವೀಸಾದ ಮೇಲೆ ಬಂದಿರುವ ಪಾಕಿಸ್ತಾನದ ಪ್ರಜೆಯೊಬ್ಬ ಕೊಚ್ಚಿಯ ಅತಿ ಭದ್ರತೆಯ ಇನ್ಫೊ ಪಾರ್ಕ್ನಲ್ಲಿ ಜಾಹೀರಾತಿಗೆ ಸಂಬಂಧಿಸಿದ ಚಿತ್ರೀಕರಣದಲ್ಲಿ ಭಾಗವಹಿಸಿದ್ದನ್ನು ಕೇರಳ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಮುಹಮದ್ ಜುನೈದ್ ಖಾನ್ ಎಂಬಾತ ಪ್ರವಾಸಿ ವೀಸಾದ ಮೇಲೆ ಜೂನ್ 28ರಂದು ಕೊಚ್ಚಿಗೆ ಬಂದು ಚಿತ್ರೀಕರಣದಲ್ಲಿ ಪಾಲ್ಗೊಂಡ ನಂತರ ಜೂನ್ 30ರಂದು ಮುಂಬೈಗೆ ಹೋಗಿದ್ದಾನೆ ಎಂದು ಗೃಹ ಸಚಿವ ತಿರುವಂಚೂರು ರಾಧಾಕೃಷ್ಣನ್ ಅವರು ವಿಧಾನಸಭೆಗೆ ತಿಳಿಸಿದ್ದಾರೆ.
ವೀಸಾ ನಿಯಮವನ್ನು ಉಲ್ಲಂಘಿಸಿ ಖಾನ್ ತೇಜೊಮಯಿ ಕಟ್ಟಡದಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾನೆ. ಆತನನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಿಪಿಐ ಮುಖಂಡ ಕೊಡಿಯೆರಿ ಬಾಲಕೃಷ್ಣನ್ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಇನ್ಫೊ ಪಾರ್ಕ್ನಲ್ಲಿ ವಿಪ್ರೊ, ಟಿಸಿಎಸ್ ಮತ್ತು ಕಾಗ್ನಿಜೆಂಟ್ ಸೇರಿದಂತೆ ದೇಶ ವಿದೇಶಗಳ 80 ಮಾಹಿತಿ ತಂತ್ರಜ್ಞಾನ ಕಂಪೆನಿಗಳಿವೆ.ಖಾನ್ನನ್ನು ಕರೆಯಿಸಿದ ಕುಂಜುಬ್ದುಲ್ಲಾ ಮತ್ತು ಚಿತ್ರೀಕರಣ ತಂಡದ ಸಮನ್ವಯ ಅಧಿಕಾರಿ ಕೃಷ್ಣಕುಮಾರ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.