ನವದೆಹಲಿ (ಪಿಟಿಐ): `ತೆರಿಗೆ ತಪ್ಪಿಸುವ ಪ್ರವೃತ್ತಿ ತಡೆ ಸಾಮಾನ್ಯ ನಿಯಮ (ಜಿಎಎಆರ್) ಸಂಬಂಧಿಸಿದ ಎಲ್ಲ ಗೊಂದಲಗಳನ್ನು ಹಣಕಾಸು ಸಚಿವಾಲಯ ಶೀಘ್ರದಲ್ಲೇ ಇತ್ಯರ್ಥ ಪಡಿಸಲಿದೆ~ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
`ಬಜೆಟ್ನಲ್ಲಿ `ಜಿಎಎಆರ್~ ಪ್ರಸ್ತಾವ ಬಂದಾಗಲೇ ಮುಂದೊಂದು ದಿನ ಇದು ದೊಡ್ಡ ಸಮಸ್ಯೆ ಸೃಷ್ಟಿಸಲಿದೆ ಎನ್ನುವುದು ಸ್ಪಷ್ಟವಾಗಿತ್ತು. ಈಗ ಹಣಕಾಸು ಖಾತೆ ಜವಾಬ್ದಾರಿ ವಹಿಸಿಕೊಂಡಿರುವ ಪ್ರಧಾನಿ ಅವರೇ ಈ ಅಸ್ಥಿರತೆಯನ್ನು ಬಗೆಹರಿಸಲಿದ್ದಾರೆ ಎಂದು ಅವರು ಭಾನುವಾರ ಇಲ್ಲಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.
`ಹಿಂದಿನ ಹಣಕಾಸು ಸಚಿವರು (ಪ್ರಣವ್ ಮುಖರ್ಜಿ) ಸಮಸ್ಯೆಯಾಗಿದ್ದರೇ? ಎನ್ನುವ ಪ್ರಶ್ನೆಗೆ ಮೊಂಟೆಕ್, `ಮಾಧ್ಯಮಗಳು ಯಾವಾಗಲೂ ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿ ಕಟ್ಟುಕಟ್ಟಲು ಯತ್ನಿಸುತ್ತಿರುತ್ತವೆ. ಪ್ರಧಾನಿ ಮತ್ತು ಪ್ರಣವ್ ವಿರುದ್ಧ ಬರುತ್ತಿರುವ ವರದಿಗಳು ಇದನ್ನೇ ಪ್ರತಿಬಿಂಬಿಸುತ್ತಿವೆ~ ಎಂದರು.
`ಜಿಎಎಆರ್~ ದೊಡ್ಡ ವಿಷಯ. ಈ ಕುರಿತು ಹೂಡಿಕೆದಾರರಲ್ಲಿ ಜಾಗೃತಿ ಮೂಡಿಸಲು ಹಣಕಾಸು ಸಚಿವಾಲಯ ಪ್ರಯತ್ನಿಸುತ್ತಿದೆ~ ಎಂದರು.