ಮುಂಬೈ(ಪಿಟಿಐ): ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಪ್ರಸಕ್ತ ಹಣಕಾಸು ವರ್ಷದ ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸ್ವಲ್ಪ ಮಟ್ಟಿಗಾದರೂ ಪ್ರಗತಿ (ಶೇ 0.4ರಷ್ಟು) ಸಾಧಿಸಿರುವುದನ್ನು ಹಣ ಕಾಸು ತಜ್ಞರು ಸ್ವಾಗತಿಸಿದ್ದಾರೆ.
‘ಮಾರುಕಟ್ಟೆ ತಜ್ಞರು ‘ಜಿಡಿಪಿ’ ಶೇ 4ಕ್ಕೆ ಕುಸಿಯಲಿದೆ ಎಂದು ಅಂದಾಜು ಮಾಡಿದ್ದರು. ಆದರೆ, ನಿರೀಕ್ಷೆ ಮೀರಿ ಶೇ 4.8ಕ್ಕೆ ಏರಿಕೆ ಕಂಡಿದೆ. ಇದು ಆಶಾದಾಯಕ ಬೆಳವಣಿಗೆ. ಆದರೆ, ಸರ್ಕಾರ ಮೂರು ಮತ್ತು ನಾಲ್ಕನೇ ತ್ರೈಮಾಸಿಕ ದಲ್ಲಿ ಯೋಜನಾ ವೆಚ್ಚದಲ್ಲಿ ಕಡಿತ ಮಾಡಲು ಮುಂದಾದರೆ ಆರ್ಥಿಕ ಪ್ರಗತಿ ಮತ್ತೆ ಕುಸಿಯಲಿದೆ’ ಎಂದು ಭಾರತೀಯ ಸ್ಟೇಟ್ ಬ್ಯಾಂಕ್(ಎಸ್ಬಿಐ) ಆರ್ಥಿಕ ಸಮೀಕ್ಷಾ ತಂಡ ಎಚ್ಚರಿಕೆ ನೀಡಿದೆ.
‘ಪ್ರಸಕ್ತ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ ಬಜೆಟ್ನಲ್ಲಿ ಅಂದಾಜು ಮಾಡಿದ್ದ ಯೋಜನಾ ವೆಚ್ಚ ದಲ್ಲಿ ಶೇ 84ರಷ್ಟು ವ್ಯಯಿಸಲಾಗಿದೆ. ಉಳಿದಿರುವ ಶೇ 16ರಷ್ಟು ಮೊತ್ತವನ್ನು ಉಳಿದ ಐದು ತಿಂಗಳಿಗೆ ಹಂಚಿಕೆ ಮಾಡ ಬೇಕು. ವರ್ಷಾಂತ್ಯದಲ್ಲಿ ಯೋಜನಾ ವೆಚ್ಚದಲ್ಲಿ ಕಡಿತ ಆಗುವುದರಿಂದ ‘ಜಿಡಿಪಿ’ ಕುಸಿಯುವ ಸಾಧ್ಯತೆ ಇದೆ’ ಎಂದು ಈ ಅಧ್ಯಯನ ವಿಶ್ಲೇಷಿಸಿದೆ.
‘ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 5ರಷ್ಟು ‘ಜಿಡಿಪಿ’ ದಾಖಲಾಗುವುದು ಕಷ್ಟ. ಆದರೆ, ಹಣಕಾಸು ಮಾರುಕಟ್ಟೆ ಯಲ್ಲಿ ಸ್ಥಿರತೆ ಮೂಡಿರುವುದರಿಂದ ಎರಡು ಮತ್ತು ಮೂರನೇ ತ್ರೈಮಾಸಿಕ ದಲ್ಲಿ ‘ಜಿಡಿಪಿ’ ಚೇತರಿಕೆ ಕಾಣಬಹುದು’ ಎಂದು ಷೇರು ದಲ್ಲಾಳಿ ಸಂಸ್ಥೆ ‘ನೊಮುರಾ’ ಹೇಳಿದೆ.