ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಜಿಲ್ಲಾಡಳಿತವೆಲ್ಲಾ ದೇವನಹಳ್ಳಿಗೆ ವರ್ಗವಾಗಲಿ'

ನೂತನ ಜಿಲ್ಲೆ ಬೇಡಿಕೆ ಸೂಕ್ತವಾಗಿದೆ * ವಿಕೇಂದ್ರೀಕರಣದ ಆಶಯ ಹೊಂದಿದೆ
Last Updated 20 ಜುಲೈ 2013, 8:36 IST
ಅಕ್ಷರ ಗಾತ್ರ

ದೇವನಹಳ್ಳಿಯನ್ನು ನೂತನ ಜಿಲ್ಲೆಯನ್ನಾಗಿ ಮಾಡುವುದರಿಂದ ಬೆಂಗಳೂರು ನಗರ ಜಿಲ್ಲೆಯ ಮೇಲೆ ಈಗ ಇರುವ ಒತ್ತಡ ಗಮನೀಯವಾಗಿ ಕಡಿಮೆಯಾಗುತ್ತದೆ ಎಂಬುದು ತಿಳಿದ ವಿಚಾರವೇ. ಹೀಗಾಗಿ ವಿಕೇಂದ್ರಿಕರಣದ ದೃಷ್ಟಿಯಿಂದ ನೋಡಿದಾಗ ದೇವನಹಳ್ಳಿಯನ್ನು ಜಿಲ್ಲೆಯಾಗಿ ಮಾಡುವುದು ಸೂಕ್ತವಾದ ಬೇಡಿಕೆಯೇ ಸರಿ.

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ್ದ ರಾಮನಗರವನ್ನು ಮಾಗಡಿ, ಚನ್ನಪಟ್ಟಣ ಮತ್ತು ಕನಕಪುರ ತಾಲ್ಲೂಕುಗಳ ಜೊತೆಗೂಡಿಸಿ ರಾಮನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ರಚಿಸಲಾಯಿತು. ಇದೇ ರೀತಿ ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ಹೊಸಕೋಟೆಗಳನ್ನು ದೇವನಹಳ್ಳಿ ಜಿಲ್ಲಾ ವ್ಯಾಪ್ತಿಗೆ ತರುವುದು ಉಚಿತ.

ದೇವನಹಳ್ಳಿಯು ಒಂದು ಜಿಲ್ಲಾ ಕೇಂದ್ರವಾಗ ಬೇಕಾದ ಎಲ್ಲಾ ಅರ್ಹತೆಯನ್ನೂ ಹೊಂದಿದೆ. ಬೆಂಗಳೂರು ನಗರದಲ್ಲಿದ್ದ ವಿಮಾನ ನಿಲ್ದಾಣ ದೇವನಹಳ್ಳಿಗೆ ಸ್ಥಳಾಂತರವಾದ ನಂತರ ಈ ಭಾಗದ ಜಮೀನಿನ ಮೌಲ್ಯ ಹೆಚ್ಚಿದೆ. ಹಿಂದೂಪುರ, ಹೈದರಾಬಾದ್ ಮತ್ತು ಬಳ್ಳಾರಿ ಕಡೆಗಳಿಂದ ಬರುವವರು ಇದೇ ರಸ್ತೆಯನ್ನು ಬಳಸಬೇಕು. ಜಿಲ್ಲಾ ಕೇಂದ್ರವಾಗಲು ಮುಖ್ಯವಾಗಿ ಅಕ್ಕ ಪಕ್ಕದ ತಾಲ್ಲೂಕುಗಳಾದ ನೆಲಮಂಗಲ, ಹೊಸಕೋಟೆ ಮತ್ತು ದೊಡ್ಡಬಳ್ಳಾಪುರದ ಜನರಿಗೆ ತಮ್ಮ ಕಂದಾಯ, ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಳ್ಳಲು ಕಚೇರಿಗೆ ಹೋಗಿಬರಲು ಅವು ಹತ್ತಿರದಲ್ಲಿರಬೇಕು. ನೆಲಮಂಗಲದ ಜನರಿಗೆ ದೇವನಹಳ್ಳಿ ಹತ್ತಿರವಿಲ್ಲದಿರಬಹುದು ಆದರೆ ಇಲ್ಲಿ ಕೈಗಾರಿಕೆಗಳ ಅಸ್ತಿತ್ವ ಇರುವುದರಿಂದ ದೇವನಹಳ್ಳಿಯಲ್ಲಿ ಅಂತರರಾಷ್ಟ್ರೀಯ  ವಿಮಾನ ನಿಲ್ದಾಣದ ಕಾರಣದಿಂದಾಗಿ ಅನುಕೂಲವಾಗಬಹುದು. ಬೆಂಗಳೂರಿಗೆ ಆಗುವ ಜನಸಾಂದ್ರತೆಯ ಒತ್ತಡ, ಸಂಚಾರ ದಟ್ಟಣೆ, ಎಗ್ಗಿಲ್ಲದೆ ಆಗುತ್ತಿರುವ ರಿಯಲ್ ಎಸ್ಟೇಟ್ ದಂಧೆ ಕಡಿಮೆಯಾಗುತ್ತದೆ. ದಿನನಿತ್ಯ ಲಕ್ಷಾಂತರ ಜನ ಬೆಂಗಳೂರಿಗೆ ಬಂದು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವ ತೊಂದರೆ ತಪ್ಪುತ್ತದೆ. ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಬೆಂಗಳೂರಿನಿಂದ 40 ಕಿ.ಮಿ. ದೂರದ ದೇವನಹಳ್ಳಿ ಅನುಕೂಲಕರ ಸ್ಥಳ. ಕೃಷಿ ಅಭಿವೃದ್ಧಿಗೆ ಕೂಡಾ ಒತ್ತು ನೀಡಬೇಕು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಸ್ತಿತ್ವದ ದೃಷ್ಟಿಯಿಂದ: ದೇವನಹಳ್ಳಿ ಜಿಲ್ಲೆಯೆಂದರೆ ಅದು ಕೇವಲ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರು ಬದಲಾವಣೆ ಅಷ್ಟೆ. 1947ರಿಂದ ಅಸ್ತಿತ್ವದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ತನ್ನದೇ ಆದ ಇತಿಹಾಸವಿದೆ. ದೇವನಹಳ್ಳಿಯನ್ನು ಜಿಲ್ಲೆಯೆಂದು ಬದಲಾವಣೆ ಮಾಡುವುದರಿಂದ ಸರ್ಕಾರಿ ದಾಖಲೆಗಳನ್ನು, ಗೆಜೆಟ್ ಇತ್ಯಾದಿ ದಾಖಲೆಗಳನ್ನು ಬದಲಾಯಿಸಬೇಕು.

ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಡಳಿತ ಕಚೇರಿ ವಿಶ್ವೇಶ್ವರಯ್ಯ ಟವರ್‌ನಲ್ಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವಾಗಿ ದೇವನಹಳ್ಳಿಯನ್ನು ಮಾಡಿ ಆಡಳಿತ ಕಚೇರಿಯನ್ನು ಇಲ್ಲಿಗೆ ಸ್ಥಳಾಂತರಿಸುವುದೇ ಸೂಕ್ತ. ದೇವನಹಳ್ಳಿಯೆಂದು ಹೊಸದಾಗಿ ನಾಮಕರಣ ಮಾಡುವ ಬದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯೆಂದೇ ಉಳಿಸಿಕೊಂಡರೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಬೆಂಗಳೂರು ಹೆಸರು ಇರುವುದರಿಂದ ಹೆಚ್ಚು ಬೆಳವಣಿಗೆಗೆ ಅವಕಾಶವಾಗುತ್ತದೆ. ದೇವನಹಳ್ಳಿಗೆ ಬೆಂಗಳೂರು ನಗರ ಜಿಲ್ಲೆಗೆ ಹೊಂದಿಕೊಂಡಂತಿರುವ ಯಲಹಂಕದ ಕೆಲವು ಭಾಗ ಮತ್ತು ರಾಜಾನುಕುಂಟೆ ಸೇರಿಕೊಳ್ಳುತ್ತದೆ. ಜಿಲ್ಲಾ ಕೇಂದ್ರವಾಗಲು ಇರಬೇಕಾದ ಕಚೇರಿ, ಆಸ್ಪತ್ರೆ, ಶಾಲಾ ಕಾಲೇಜು ಮತ್ತು ನೌಕರರ ವಸತಿ ಸಮುಚ್ಚಯಗಳನ್ನು ದೇವನಹಳ್ಳಿಯಲ್ಲಿ ನಿರ್ಮಿಸಲು ಸಾಧ್ಯ.

ನೀರಾವರಿ ಸೌಲಭ್ಯದ ದೃಷ್ಟಿಯಿಂದ ಗಮನಿಸಿದಾಗ ಈಗಾಗಲೇ ಈ ಭಾಗದಲ್ಲಿ ನೇತ್ರಾವತಿ ನದಿಯಿಂದ 300 ಟಿ.ಎಂ.ಸಿ ನೀರನ್ನು ಈ ಭಾಗಕ್ಕೆ ಹರಿಸಬೇಕೆಂಬ ಶಾಶ್ವತ ನೀರಾವರಿ ಬೇಡಿಕೆಯ ಹೋರಾಟ ನಡೆಯುತ್ತಿದೆ. ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುವ ಎಲ್ಲಾ ಹಂತದ ಯೋಜನೆಗಳೂ ಮುಗಿದಿವೆ. ಒಪ್ಪಂದದಂತೆ ಕಾವೇರಿ ನೀರನ್ನು ಬೆಂಗಳೂರು ನಗರಕ್ಕೆ ಮಾತ್ರ ಬಳಸಬೇಕಾಗಿರುವುದರಿಂದ ದೇವನಹಳ್ಳಿಗೆ ಈ ನೀರನ್ನು ಹರಿಸುವುದು ವಿವಾದಕ್ಕೀಡಾಗಬಹುದು.

ನನ್ನ ಪ್ರಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಿರುವ ಇತಿಹಾಸದ ಹಿನ್ನೆಲೆಯಲ್ಲಿ ಮತ್ತು ದಾಖಲೆಗಳ ಬದಲಾವಣೆಗಳ ತೊಂದರೆಯಾಗುವುದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯೆಂದೇ ಹೆಸರನ್ನು ಉಳಿಸಿಕೊಂಡು ದೇವನಹಳ್ಳಿಗೆ ಆಡಳಿತ ವರ್ಗಾಯಿಸುವುದು ಹೆಚ್ಚು ಅನುಕೂಲಕರ.
ಬೆಂಗಳೂರು ನಗರದಲ್ಲಿನ ಕೈಗಾರಿಕೆಗಳನ್ನು ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ಮತ್ತು ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಿಸಿದರೆ ಆರ್ಥಿಕ ಅಭಿವೃದ್ಧಿಯಾಗುವುದಲ್ಲದೆ ನಗರದ ಮೇಲಿನ ಜನಸಾಂದ್ರತೆಯ ಒತ್ತಡ, ಹೆಚ್ಚುತ್ತಿರುವ ಭೂಮಿ ಬೆಲೆ, ಮನೆ ಬಾಡಿಗೆ ದರಗಳು ತಗ್ಗುತ್ತವೆ.

ದಾಬಸ್‌ಪೇಟೆ ದೊಡ್ಡಬಳ್ಳಾಪುರ ಮೂಲಕ ತಮಿಳುನಾಡಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 207 ಇಲ್ಲಿಯೇ ಹಾದು ಹೋಗುವುದರಿಂದ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಿದರೆ ಚೆನ್ನೈಗೆ ಹೋಗುವ ಸರಕು ಸಾಗಣೆ ಲಾರಿಗಳು ಬೆಂಗಳೂರು ನಗರಕ್ಕೆ ಬರುವುದರ ಬದಲು ನೇರವಾಗಿ ಚೆನ್ನೈಗೆ ಹೋಗಬಹುದು. ಲಾರಿಗಳಿಂದಾಗಿ ಉಂಟಾಗುತ್ತಿರುವ ಬೆಂಗಳೂರು ನಗರಕ್ಕಾಗುತ್ತಿರುವ ನಿರಂತರ ಕಿರಿಕಿರಿಯೂ (ಜ್ಞ್ಛಿಛ್ಟ್ಞಿಚ್ಝ ್ಞ್ಠಜಿಚ್ಞ್ಚಛಿ)  ತಪ್ಪುತ್ತದೆ.

ಬೆಂಗಳೂರಿನ ಹೃದಯ ಭಾಗದಲ್ಲಿರುವ ರೇಸ್‌ಕೋರ್ಸ್ ಅನ್ನು ಗ್ರಾಮಾಂತರದ ಯಾವುದಾದರೂ ತಾಲ್ಲೂಕಿಗೆ ಸ್ಥಳಾಂತರಿಸಿದರೆ ನಗರದ ಮಧ್ಯಭಾಗದಲ್ಲಿ ಉಂಟಾಗುತ್ತಿರುವ ವಾಹನಗಳ ಕಿರಿಕಿರಿಯಿಂದ ಮುಕ್ತಿ ದೊರಕುತ್ತದೆ. ಅಲ್ಲಿಗೆ ಇಲ್ಲಿನ ಅನುಕೂಲಸ್ಥ ಜನರು ಸ್ವಂತ ನಿವೇಶನಗಳನ್ನು ಕೊಂಡು ಮನೆಗಳನ್ನು ನಿರ್ಮಿಸಿಕೊಂಡು ತೆರಳುತ್ತಾರೆ. ಇದರಿಂದಾಗಿ ನಗರದಲ್ಲಿನ ಮನೆ ಬಾಡಿಗೆ ದರವೂ ಕಡಿಮೆಯಾಗಿ ಮಧ್ಯಮ ವರ್ಗದ ಜನರು ಉಸಿರಾಡಬಹುದು.

ನಗರದಲ್ಲಿ ವಾಯುಮಾಲಿನ್ಯ ಶಬ್ದಮಾಲಿನ್ಯವೂ ಕಡಿಮೆಯಾಗಿ `ಲಂಗ್ ಸ್ಪೇಸ್'  ನಿರ್ಮಾಣವಾಗುತ್ತದೆ. ಕಸದ ಸಮಸ್ಯೆ ಕೂಡಾ ನಿವಾರಣೆ ಆಗಬಹುದು. ನಗರದಲ್ಲಿ ಹೆಚ್ಚುತ್ತಿರುವ ಅಪಾರ್ಟ್‌ಮೆಂಟ್‌ಗಳು ಮತ್ತು ಅವುಗಳಿಗೆ ನೀರು ಒದಗಿಸಲು ಆಗುತ್ತಿರುವ ತೊಂದರೆ ಮೊನ್ನೆ ಸದನದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು ನಗರದಿಂದ ಖಾಸಗಿ ಕಂಪೆನಿಗಳು, ಕೈಗಾರಿಕೆಗಳು, ರೇಸ್‌ಕೋರ್ಸ್ ಗ್ರಾಮಾಂತರ ಜಿಲ್ಲೆಗೆ ಸ್ಥಳಾಂತರವಾದರೆ ಉದ್ಯಾನ ನಗರಿಯೆಂಬ ಹೆಸರೂ ಹಾಗೂ ಇಲ್ಲಿನ ಕೆರೆಗಳು ಉಳಿಯುತ್ತವೆ. ಹೊಸ ಬಡಾವಣೆಗಳಿಗೆ ಮೂಲಸೌಕರ್ಯ ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಆಡಳಿತವನ್ನು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಗೆ  ಸ್ಥಳಾಂತರ ಮಾಡುವುದೊಂದೇ ಪರಿಹಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT