ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಶುಕ್ರವಾರ ನಗರದ ಮಾಲಾದೇವಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಉತ್ತರ ಕನ್ನಡ ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ನೀರಸವಾಗಿತ್ತು.
ಬೆಳಿಗ್ಗೆ ಆರಂಭವಾದ ಕ್ರೀಡಾಕೂಟ ದಲ್ಲಿ ಬೆರಳೆಣಿಕೆಯಷ್ಟು ಕ್ರೀಡಾಪಟು ಗಳು ಮಾತ್ರ ಭಾಗವಹಿಸಿದ್ದರು.
ಮಹಿಳಾ ಕ್ರೀಡಾಪಟುಗಳು 5–6 ಮಂದಿ ಇದ್ದರು. 100 ಮೀ. ಓಟ, ಗುಂಡು ಎಸೆತ, ಟೇಬಲ್ ಟೆನಿಸ್, ವೇಟ್ ಲಿಫ್ಟಿಂಗ್, ಬ್ಯಾಡ್ಮಿಂಟನ್ ಮುಂತಾದ ಕ್ರೀಡೆಗಳು ನಡೆದವು. ಆದರೆ ಎಲ್ಲ ಕ್ರೀಡೆಗಳಲ್ಲೂ 3ರಿಂದ 5 ಸ್ಪರ್ಧಿಗಳು ಮಾತ್ರ ಭಾಗವಹಿಸಿದ್ದರು.
‘ನೌಕರರ ಕ್ರೀಡಾಕೂಟವನ್ನು ಪ್ರತಿ ವರ್ಷ ಸರಿಯಾಗಿ ಆಯೋಜನೆ ಮಾಡುತ್ತಿಲ್ಲ. ರಾಜ್ಯಮಟ್ಟಕ್ಕೆ ಆಯ್ಕೆ ಯಾದವರಿಗೆ ಕ್ರೀಡಾಕೂಟ ಆರಂಭಕ್ಕೆ ಒಂದು ದಿನ ಬಾಕಿ ಎನ್ನುವ ಹಾಗೆ ಕ್ರೀಡಾಕೂಟಕ್ಕೆ ಭಾಗವಹಿಸಲು ಪತ್ರ ಬರುತ್ತದೆ. ಹೀಗಾದರೆ ಬೇರೆ ರಾಜ್ಯಗಳಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಹೇಗೆ ಭಾಗವಹಿಸಲು ಸಾಧ್ಯ’ ಎಂದು ಕ್ರೀಡಾಪಟುವೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಕ್ರೀಡಾಕೂಟವನ್ನು ನಗರಸಭೆ ಅಧ್ಯಕ್ಷೆ ಲೀಲಾಬಾಯಿ ಠಾಣೇಕರ ಉದ್ಘಾಟಿಸಿ ದರು. ಮುಖ್ಯ ಅತಿಥಿಯಾಗಿದ್ದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಆರತಿ ಬಾನಾವಳಿಕರ ಮಾತನಾಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ. ಗಾಯತ್ರಿ, ದೈಹಿಕ ಶಿಕ್ಷಣದ ಶಿಕ್ಷಕ ಆರ್.ಎಸ್. ನಾಯ್ಕ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಉದಯ ಜಯರಾಮ ಕಳಸ ಹಾಜರಿದ್ದರು.