ನವದೆಹಲಿ: ಜೈಲಿನಲ್ಲಿ ಇದ್ದರೂ ಚುನಾವಣೆಗೆ ನಿಲ್ಲಲು ಅವಕಾಶ ಮಾಡಿಕೊಡುವ ಜನಪ್ರತಿನಿಧಿ ಮಸೂದೆ (ತಿದ್ದುಪಡಿ) 2013ಕ್ಕೆ ಲೋಕಸಭೆ ಶುಕ್ರವಾರ 15 ನಿಮಿಷಗಳಲ್ಲಿ ಒಪ್ಪಿಗೆ ನೀಡಿತು.
`ಜೈಲಿನಲ್ಲಿ ಇದ್ದವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ದೋಷಪೂರಿತವಾಗಿತ್ತು. ಅದನ್ನು ಸರಿಪಡಿಸುವ ಸಂವಿಧಾನಾತ್ಮಕ ಅಧಿಕಾರ ಶಾಸಕಾಂಗ ಹೊಂದಿದೆ' ಎಂದು ಸರ್ಕಾರ ಸದನದಲ್ಲಿ ಸಮರ್ಥಿಸಿಕೊಂಡಿತು. ಮಸೂದೆಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಯಬೇಕೆಂದು ಕೆಲವು ಸದಸ್ಯರು ಆಗ್ರಹಿಸಿದರು. ಆದರೆ, ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಸೇರಿದಂತೆ ಬಹುಪಾಲು ಸದಸ್ಯರು ಮಸೂದೆಯನ್ನು ಬೆಂಬಲಿಸಿದರು.
ಜನಪ್ರತಿನಿಧಿ ಕಾಯ್ದೆ ಪ್ರಕಾರ, ಜೈಲಿನಲ್ಲಿರುವವರು ಮತ ಚಲಾಯಿಸುವಂತಿಲ್ಲ ಮತ್ತು ಸಂಸತ್ತು ಹಾಗೂ ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಜುಲೈ 10ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಇದನ್ನು ನಿರರ್ಥಕಗೊಳಿಸುವ ಮಸೂದೆಗೆ ಆಗಸ್ಟ್ 27ರಂದು ರಾಜ್ಯಸಭೆ ಒಪ್ಪಿಗೆ ನೀಡಿತ್ತು.