ನವದೆಹಲಿ (ಪಿಟಿಐ): ಕಾರಾಗೃಹಕ್ಕೆ ಸಂಬಂಧಿಸಿದ ಭಾರತ- ಪಾಕಿಸ್ತಾನದ ನ್ಯಾಯಾಂಗ ಸಮಿತಿಯು ಪಾಕ್ ಕೈದಿಗಳನ್ನು ಇರಿಸಿರುವ ದೇಶದ ವಿವಿಧ ಜೈಲುಗಳಿಗೆ ನೀಡಿದ್ದ ಐದು ದಿನಗಳ ಭೇಟಿ ಶುಕ್ರವಾರ ಕೊನೆಗೊಂಡಿತು.
ನಾಲ್ವರು ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡಿರುವ ಸಮಿತಿಯು ಜನವರಿ 23ರಿಂದ ತಿಹಾರ್ ಜೈಲು, ಜೈಪುರ ಹಾಗೂ ಅಮೃತಸರದ ಕೇಂದ್ರ ಕಾರಾಗೃಹಗಳಿಗೆ ತೆರಳಿ ಅಲ್ಲಿನ ಸ್ಥಿತಿಗತಿ ಮತ್ತು ಕೈದಿಗಳ ಪರಿಸ್ಥಿತಿಯನ್ನು ಅವಲೋಕಿಸಿತು.
ಮಹಿಳೆಯರು, ಬಾಲಾಪರಾಧಿಗಳು, ವಯೋವೃದ್ಧರು ಮತ್ತು ಮಾನಸಿಕ ಅಸ್ವಸ್ಥ ಕೈದಿಗಳಲ್ಲಿ ಹಲವರು ಅನಾರೋಗ್ಯ ಪೀಡಿತರಾಗಿದ್ದರೆ, ಇನ್ನು ಕೆಲವರು ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ, ಮಾನವೀಯ ದೃಷ್ಟಿಯಿಂದ ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕು. ತೀವ್ರ ಅನಾರೋಗ್ಯ ಮತ್ತು ಮಾನಸಿಕ ಅಸ್ವಸ್ಥರಾಗಿ ಬಳಲುತ್ತಿರುವ ಕೈದಿಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕು ಎಂದು ಸಮಿತಿ ಸೂಚಿಸಿತು.