ಸಿರುಗುಪ್ಪ: ಜ್ಞಾನಕಾರ್ಯ ಮಾಡುವು ದರಿಂದ ಸಮಾಜದಲ್ಲಿ ಮಹತ್ತರ ಬದಲಾವಣೆ ತರಬಹುದೆಂದು ಶ್ರೀ ಸುವಿದ್ಯೇಂದ್ರ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು.
ಪಟ್ಟಣದಲ್ಲಿ ಸೋಮವಾರ ರಾತ್ರಿ ವ್ಯಾಸ ವಿಜ್ಞಾನ ವೈಜಯಂತೀ ಜ್ಞಾನಸತ್ರ ಕಾರ್ಯಕ್ರಮದಲ್ಲಿ ವಸುಧೇಂದ್ರ ವೇದಿಕೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಭಗವಂತನ ನಾಮ ಸ್ಮರಣೆಯಿಂದ ಆತ್ಮಶುದ್ದಿಯಾಗುತ್ತದೆ, ಧಾರ್ಮಿಕ ಪೂಜಾ ಕಾರ್ಯಗಳನ್ನು ಮಾಡುವುದರಿಂದ ಸದ್ಗುಣದ ಸುಗಂಧ ಬೀರಿ ಇತರರನ್ನು ಸದ್ಗುಣಿಗಳನ್ನಾಗಿ ಮಾಡುವ ಕೆಲಸ ಸ್ವಾರ್ಥಕ್ಕಾಗದೇ ಭಗವಂತನ ಪ್ರೀತಿಗಾಗಿ ಇರಲಿ ಎಂದು ನುಡಿದರು.
ಇಲ್ಲಿ ಒಂದು ತಿಂಗಳ ಕಾಲ ಜ್ಞಾನಸತ್ರ ಕಾರ್ಯಕ್ರಮ ನಡೆಸುತ್ತಿರುವುದು ಪ್ರಶಂಸನೀಯ ಎಂದು ಶ್ರೀಗಳು ಸಂತಸ ವ್ಯಕ್ತಪಡಿಸಿದರು.
ಶ್ರೀಗಳು ಇದೇ ಸಂಧರ್ಭದಲ್ಲಿ ಶ್ರೀಕೃಷ್ಣನ ಪೂಜೆ ನೆರವೇರಿಸಿದ ನಂತರ ತುಲಾಭಾರ ಸೇವೆ ನಡೆಯಿತು. ಪಟ್ಟಣಕ್ಕೆ ರಾತ್ರಿ ಆಗಮಿಸಿದಾಗ ಶ್ರೀಗಳನ್ನು ಶೋಭಾಯಾತ್ರೆ ಮೂಲಕ ಭವ್ಯ ಸ್ವಾಗತ ನೀಡಿ ಬರಮಾಡಿಕೊಳ್ಳ ಲಾಯಿತು.
ಗುರು ರಾಘವೇಂದ್ರ ಅಷ್ಟೋತ್ತರ ಮಂಡಳಿ ಅಧ್ಯಕ್ಷ ಎ.ಜೆ.ಸಂಜಯಾಚಾರ್, ವ್ಯಾಸ ವಿಜ್ಞಾನ ವೈಜಯಂತೀ ಸೇವಾ ಸಮಿತಿಯ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಸದಸ್ಯ ಬಿ.ಗುರುರಾಜಚಾರ್ ಮತ್ತು ವಿಪ್ರ ಬಾಂಧವರು ಪಾಲ್ಗೊಂಡಿದ್ದರು.