ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿಷ - ವಾಸ್ತು

Last Updated 1 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಶ್ವೇತಾ ಕೆ.ಬಿ. ದಾವಣಗೆರೆ: ಮಗಳ ಜನನ 9-7-2010, ಸಮಯ 6-20 ಬೆಳಿಗ್ಗೆ.
ಪ್ರಶ್ನೆ: ಸಂಖ್ಯಾಶಾಸ್ತ್ರದಂತೆ ಇಂಗ್ಲೀಷ್ ಹೆಸರು, ಮುಂದಿನ ಶಿಕ್ಷಣದ ಬಗ್ಗೆ ತಿಳಿಸಿ.

ಉತ್ತರ: ಇವರದು ಮಿಥುನ ಲಗ್ನ, ರೋಹಿಣಿ ನಕ್ಷತ್ರ, ವೃಷಭರಾಶಿ. ಹಿಂದು ಪದ್ಧತಿಯಂತೆ ಹೆಸರು ‘ವಾ” ಅಕ್ಷರದಿಂದ ಪ್ರಾರಂಭ ವಾಗಬೇಕು. ಸಂಖ್ಯಾಶಾಸ್ತ್ರದಂತೆ ‘VANI’, ‘VAARIJE’, ‘VEENA’ ಇತ್ಯಾದಿ 4 ಅಥವ 8 ಅಂಕೆ ಬರುವಂತೆ ಹೆಸರು ಇಡಬಹುದು. ಇವರ ಲಗ್ನವು ಪುಷ್ಕರ ನವಾಂಶದಲ್ಲಿದ್ದು ಇಲ್ಲಿ ರವಿ ಮತ್ತು ಕೇತು ಸ್ಥಿತರಿದ್ದಾರೆ. ಈ ಸ್ಥಾನವನ್ನು  ಯೋಗಿ ಶನಿ ವೀಕ್ಷಿಸುತ್ತಾರೆ. ಲಗ್ನಾಧಿಪತಿ ಬುಧರು ಲಗ್ನಭಾವದಲ್ಲಿಯೋಗಿ ಶನಿ ನಕ್ಷತ್ರ ಸ್ಥಿತರಿದ್ದಾರೆ. ಇವರನ್ನು ಗುರು ದಶಮದಿಂದ ವೀಕ್ಷಿಸುತ್ತಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಬಲಯುತರಾಗಿದ್ದು ಸ್ವಲ್ಪ ಪೀಡಿತರಾಗಿದ್ದಾರೆ.

ಇವರ ಪ್ರಾಥಮಿಕ ವಿದ್ಯಾಸ್ಥಾನ ದ್ವಿತೀಯವು ಕರ್ಕವಾಗಿದ್ದು ಇಲ್ಲಿ ಪಂಚಮಾಧಿಪತಿ ಶುಕ್ರರು ದಗ್ಧರಾಶ್ಯಾಧಿಪರಾಗಿ ಕೇತು ನಕ್ಷತ್ರ ಸ್ಥಿತರಿದ್ದಾರೆ. ದ್ವಿತೀಯಾಧಿಪತಿ ಚಂದ್ರರು ಪುಷ್ಕರನವಾಂಶದಲ್ಲಿ ಉಚ್ಛರಾದರೂ ಅವಯೋಗಿಯಾಗಿ ಸ್ವನಕ್ಷತ್ರದಲ್ಲಿವ್ಯಯ ಸ್ಥಿತರಿದ್ದಾರೆ.  ಇವರಿಗೆ ಯಾವ ಶುಭ ಸಂಬಂಧವೂ ಇಲ್ಲ.ಇದರಿಂದ ಇವರ ಹಠಮಾರಿ ಸ್ವಭಾವ ದಿಂದಾಗಿ ಇವರ ವಿದ್ಯಾಸಾಮರ್ಥ್ಯ ಹೆಚ್ಚು ಬೆಳಕಿಗೆ ಬರಲಾರದು.

ಇವರ ಮಾಧ್ಯಮಿಕ ವಿದ್ಯಾಸ್ಥಾನ ಕನ್ಯಾ ಆಗಿದ್ದು ಇಲ್ಲಿ ಭಾಗ್ಯಾಧಿಪತಿ ಶನಿ ಯೋಗಿಯಾಗಿ, ಪುಷ್ಕರ ನವಾಂಶದಲ್ಲಿ ರವಿ ನಕ್ಷತ್ರ ಸ್ಥಿತರಿದ್ದಾರೆ. ಇವರನ್ನು ಗುರು ವೀಕ್ಷಿಸುತ್ತಾರೆ. ಚಥುರ್ತಾಧಿಪತಿ ಬುಧರು ಲಗ್ನ ಸ್ಥಿತರಿದ್ದಾರೆ. ಇದರಿಂದ ಇವರ ವ್ಯಾಸಂಗ ಉತ್ತಮ ವಾಗಿರುವುದು. ಇವರು ಎಂಜನಿಯರಿಂಗ್ ಮಾಡಬಲ್ಲರು. 

ಉನ್ನತ ವಿದ್ಯಾಕಾಲದಲ್ಲಿ ರಾಹು ದಶಾ ನಡೆಯುವುದರಿಂದ ಪ್ರೀತಿ ಪ್ರೇಮಗಳ ಸುಳಿಗೆ ಸಿಲುಕಿ ವಿದ್ಯೆ ಹಾಳಾಗದಂತೆ ಎಚ್ಚರ ವಹಿಸುವುದು ಅವಶ್ಯಕ. ಶ್ರದ್ಧೆಯಿಂದ ಪ್ರಯತ್ನಿಸಿದರೆ ಉತ್ತಮ ಉನ್ನತ ವಿದ್ಯೆ ಗಳಿಸಬಲ್ಲರು. 

 ಪರಿಹಾರ: ಪಚ್ಛೆಹರಳು ಧರಿಸಬೇಕು. ದುರ್ಗಾ ಅಷ್ಟೋತ್ತರ ಪಠಿಸಬೇಕು. ಗಣಪತಿಯನ್ನು ಪೂಜಿಸಿ. 
 
ಎಸ್ ಲಕ್ಷ್ಮೀಸಾಗರ, ಚಿತ್ರದುರ್ಗ: ಜನನ 19-12-1999, ಸಮಯ 10-18 ಬೆಳಿಗ್ಗೆ.
ಪ್ರಶ್ನೆ : ಹೆಸರು ಇಟ್ಟಿಲ್ಲ. ಸರಿಯಾಗಿ ಓದುತ್ತಿಲ್ಲ.  ಮುಂದಿನ ಜೀವನದ ಬಗ್ಗೆ ತಿಳಿಸಿ.

ಉತ್ತರ: ಇವರದು ಮಕರ ಲಗ್ನ, ಭರಣಿ ನಕ್ಷತ್ರ, ಮೇಷರಾಶಿ. ಇವರ ಹೆಸರು ಹಿಂದೂ ಪದ್ಧತಿಯಂತೆ ‘ಲಿ’ ಇಂದ ಪ್ರಾರಂಭವಾಗಬೇಕು. ಇವರ ಲಗ್ನದಲ್ಲಿ ಅವಯೋಗಿ ಉಚ್ಛಕುಜ ಸ್ವನಕ್ಷತ್ರದಲ್ಲಿ ಸ್ಥಿತರಿದ್ದು ರಾಹು ಮತ್ತು ವಕ್ರೀ ಶನಿ ವೀಕ್ಷಿತರಾಗಿದ್ದಾರೆ. ಲಗ್ನಾಧಿಪತಿ ಶನಿ ವಕ್ರೀ ಆಗಿ, ನೀಚರಾಗಿ ವೈರಿ ಚಂದ್ರ ಮತ್ತು ವಕ್ರೀ ಗುರುಒಡನೆ, ಶುಕ್ರ ನಕ್ಷತ್ರದಲ್ಲಿ, ಭಾವದಲ್ಲಿ ತೃತೀಯ ಸ್ಥಿತರಿದ್ದಾರೆ. ಇವರನ್ನು ಶುಕ್ರ ವೀಕ್ಷಿಸುತ್ತಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಸಾಕಷ್ಟು ಪೀಡಿತರಾಗಿದ್ದಾರೆ.

ಇವರಿಗೆ ಸಾಮಾನ್ಯ ವಿಜ್ಞಾನದ ವಿಷಯಗಳ ವಿದ್ಯೆಗೆ ಪೂರಕವಲ್ಲ. ಇದರಿಂದ ಕಲೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಅಡೆತಡೆಗಳಿದ್ದರೂ ಹೆಚ್ಚಿನ ಪರಿಶ್ರಮದಿಂದ ಯಶಸ್ಸು ಗಳಿಸ ಬಲ್ಲರು.

ಇವರ ಅಷ್ಟಕವರ್ಗದಲ್ಲಿ ಧನ, ಭಾಗ್ಯ, ಲಾಭ ಸ್ಥಾನಗಳಲ್ಲಿ ಉತ್ತಮ ಬಿಂದುಗಳಿವೆ. ಇವು ಇವರಿಗೆ 35 ವರ್ಷದ ನಂತರ ಸಾಮಾನ್ಯ ಉತ್ತಮ ಜೀವನ ಕೊಡಬಲ್ಲದು.

ಪರಿಹಾರ: ನೀಲಮಣಿ ಧರಿಸಿ, ಕಾಳಿಕಾಸ್ತೋತ್ರ ಪಠಿಸಿ. ಆದಿತ್ಯಹೃದಯ ಪಠಿಸಿ. ಸಾಯಿಬಾಬಾರನ್ನು ಪೂಜಿಸಿ.

ಜಿ.ಎಂ ವಿಜಯಕುಮಾರ್,
ಬೆಂಗಳೂರು: ಮನೆಯ ನಕ್ಷೆ ಕಳಿಸಿದ್ದೇನೆ ದೋಷವಿದ್ದರೆ ತಿಳಿಸಿ.

ಉತ್ತರ: ಇವರ ನಿವೇಶನದಲ್ಲಿ ಪಶ್ಚಿಮದ ಶನಿಯ ಸ್ಥಾನದಲ್ಲಿ ಹೆಚ್ಚು ಖಾಲಿ ಸ್ಥಳವಿದೆ. ಇದು ಅಶುಭಕರ. ಇವರ ಪೋರ್ಟಿಕೋದಿಂದಾಗಿ ವಾಯುವ್ಯ ಕಡಿತಗೊಂಡಿದೆ. ಇದು ಮಕ್ಕಳ ಪ್ರಗತಿಗೆ ಅಶುಭಕರ. ಇವರ ಮನೆಯ ಮುಖ್ಯದ್ವಾರವು ಉತ್ತರ ವಾಯುವ್ಯದಲ್ಲಿನೀಚ ಕೇತು ಸ್ಥಾನದಲ್ಲಿದೆ. ಆದ್ದರಿಂದ ಪಾಯವನ್ನು ಆಯಾತಾಕಾರ ಗೊಳಿಸಿ ಪಶ್ಚಿಮ ವಾಯುವ್ಯಕ್ಕೆ ಮುಖ್ಯದ್ವಾರ ಬದಲಾಯಿಸಿ. ಪಶ್ಚಿಮದ ಬಾಗಿಲು ನಿಮ್ಮ ರಾಶಿಗೆ ಸರಿ ಹೊಂದುವದೋ ಗಮನಿಸಿ.

ಇವರ ಮನೆಯ ಆಗ್ನೇಯದ ಅಗ್ನಿಮೂಲೆಯಲ್ಲಿ ಶೌಚಾಲಯವಿದ್ದು, ಇದು ಕೂಡ ಅಶುಭಕರ. ಇದು ಮನೆಯಲ್ಲಿ ಜಗಳ, ಹೆಣ್ಣುಮಕ್ಕಳಿಗೆ ಅನಾರೋಗ್ಯ ತರುತ್ತದೆ. ಇದನ್ನು ಸಿಟ್ ಔಟ್ ಇರುವಲ್ಲಿಗೆ ಬದಲಾಯಿಸುವುದು ಕ್ಷೇಮಕರ.

ಇವರ ಮನೆಗೆ ಏಳು ಬಾಗಿಲು ಇದ್ದು ಇದು ಕೂಡ ಅಶುಭಕರ. ಬಾಗಿಲು 8 ಆಗುವಂತೆ ಮಾಡಿಕೊಳ್ಳಿ. ಉಳಿದಂತೆ ಇವರ ನಕ್ಷೆ ವಾಸ್ತುಶಾಸ್ತ್ರದಂತೆ ಸರಿಯಾಗಿದೆ.

ಆರ್. ವಿಶ್ವನಾಥ, ಹನಗೋಡು:
ಮನೆಯ ನಕ್ಷೆ ಕಳಿಸಿದ್ದೇನೆ. ದೋಷವಿದ್ದರೆ ತಿಳಿಸಿ.

ಉತ್ತರ: ಇವರ ನಕ್ಷೆಯಂತೆ ಮನೆಯ ಪಾಯ ಆಯತಾಕಾರವಾಗಿಲ್ಲ.ಈಶಾನ್ಯ ಮತ್ತು ವಾಯುವ್ಯ ಕಡಿತಗೊಂಡಿದೆ. ಇದು ಯಜಮಾನರ ಪ್ರಗತಿ ಮತ್ತು ಮಕ್ಕಳ ಪ್ರಗತಿಗೆ ಪೂರಕವಲ್ಲ.ಆದ್ದರಿಂದ ಪಾಯವನ್ನು ಆಯತಾಕಾರಗೊಳಿಸಿ ಮನೆಗೆ ಸೇರಿಸಿ. ಮನೆಯ ಮುಖ್ಯದ್ವಾರ ಉತ್ತರ ದಿಕ್ಕಿನಲ್ಲಿ ಮಧ್ಯದ ಗುರುವಿನ ಸ್ಥಾನದಲ್ಲಿದೆ. ಇದು ವಾಸದ ಮನೆಗೆ ಶುಭಕರವಲ್ಲ.ಇದನ್ನು ಪೂರ್ವದ ಕಡೆ ಸರಿಸಿ ಉಚ್ಛಬುಧನ ಸ್ಥಾನದಲ್ಲಿ ನಿರ್ಮಿಸಿ.

ಅಗ್ನಿಮೂಲೆಯಲ್ಲಿ ಸ್ನಾನ ಮತ್ತು ಶೌಚಾಲಯವಿದೆ. ಇದು ಕೂಡ ತಪ್ಪು. ಇವು ಮನೆಯ ಹೆಣ್ಣು ಮಕ್ಕಳಿಗೆ ಅನಾರೋಗ್ಯ, ಜಗಳ ತರುತ್ತದೆ. ಅಡುಗೆಮನೆಯನ್ನು ಆಗ್ನೇಯ ಮೂಲೆಯ ವರೆಗೆ ವಿಸ್ತರಿಸಿ ಅಡುಗೆ ಮನೆ ಅಥವಾ ರೂಮ್ ಇರುವಲ್ಲಿ ಸ್ನಾನ ಗೃಹ ಮತ್ತು ಶೌಚಾಲಯ ನಿರ್ಮಿಸಿಕೊಳ್ಳಿ. ಇವರ ಮನೆಗೆ ಒಂಬತ್ತು ಬಾಗಿಲು ಇವೆ. ಇದು ಗೃಹಪೀಡೆ ತರುತ್ತದೆ. ಆದ್ದರಿಂದ 10 ಬಿಟ್ಟು ಸಮಸಂಖ್ಯೆಯ ಬಾಗಿಲು ಬರುವಂತೆ ನೋಡಿಕೊಳ್ಳಿ.  ಉಳಿದಂತೆ ನಿಮ್ಮ ನಕ್ಷೆ ವಾಸ್ತು ಪ್ರಕಾರ ಸರಿಯಾಗಿದೆ.

 ಶಿವಕುಮಾರ್, ಧಾರವಾಡ: ಜನನ 4-11-1980, ಸಮಯ 2-00ಮಧ್ಯಾಹ್ನ.
ಪ್ರಶ್ನೆ: ಸರಕಾರಿ ಉದ್ಯೋಗ, ಮದುವೆ ಮತ್ತು ಮುಂದಿನ ಜೀವನದ ಬಗ್ಗೆ ತಿಳಿಸಿ.

ಉತ್ತರ: ಇವರದು ಕುಂಭಲಗ್ನ, ಹಸ್ತ ನಕ್ಷತ್ರ ಕನ್ಯಾರಾಶಿ. ಇವರ ಲಗ್ನದಲ್ಲಿ ಗುಳಿಕರು ಸ್ಥಿತರಿದ್ದಾರೆ. ಈ ಸ್ಥಾನವನ್ನು ಕುಜ ವೀಕ್ಷಿಸುತ್ತಾರೆ. ಲಗ್ನಾಧಿಪತಿ ಶನಿ ಅಷ್ಟಮದಲ್ಲಿ ವೈರಿ  ಚಂದ್ರ ನಕ್ಷತ್ರದಲ್ಲಿ, ಚಂದ್ರ, ನೀಚಶುಕ್ರ ಮತ್ತು ಯೋಗಿ ಗುರು ಒಡನೆ ಸ್ಥಿತರಿದ್ದಾರೆ. ಇವರನ್ನು ಪಾಪಿ ಕೇತು ದಗ್ಧರಾಶಿಯಾದ ವ್ಯಯದಿಂದ ವೀಕ್ಷಿಸುತ್ತಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಸಾಕಷ್ಟು ಪೀಡಿತರಾಗಿದ್ದಾರೆ.

 ಇವರಿಗೆ ಯಾವ ಶುಭ ಸಂಬಂಧವೂ ಇಲ್ಲ. ಇವು ಸರಕಾರಿ ಉದ್ಯೋಗಕ್ಕೆ ಪೂರಕವಲ್ಲ. ಇವರ ಉದ್ಯೋಗ ಸೂಚಕ ಅಂಶಕುಂಡಲಿಯ ಲಗ್ನವು ಮೇಷವಾಗಿದ್ದು ತೀಯಾಂಶದಲ್ಲಿದೆ.

ಲಗ್ನದಲ್ಲಿ ಉಚ್ಛರವಿ ಮತ್ತು ಕೇತು ಸ್ಥಿತರಿದ್ದಾರೆ.  ಲಗ್ನಾಧಿಪತಿ ಕುಜರು ಲಾಭ ಸ್ಥಿತರಿದ್ದಾರೆ. ಇದರಿಂದ ಇವರು ಹೆಚ್ಚಿನ ಪ್ರಯತ್ನದಿಂದ ಮಿಲಟರಿ ಅಥವಾ ಪೊಲೀಸ್ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡರೆ ಮುಂದೆ ಪ್ರಗತಿ ಸಾಧಿಸುವರು.  ಇವರ ಕಳತ್ರ ಕಾರಕ ಶುಕ್ರರು ಅಷ್ಟಮದಲ್ಲಿನೀಚರಾಗಿ ವೈರಿ ಚಂದ್ರ ನಕ್ಷತ್ರದಲ್ಲಿಚಂದ್ರ, ಶನಿ ಮತ್ತು ಗುರು ಒಡನೆ ಸ್ಥಿತರಿದ್ದಾರೆ. ಇವರನ್ನು ಪಾಪಿ ಕೇತು ದಗ್ಧರಾಶಿಯಿಂದ ವೀಕ್ಷಿಸುತ್ತಾರೆ. ಇದರಿಂದ ಇವರ ಮದುವೆ ನಿಧಾನವಾಗಿದೆ.

ಇವರ ದಾಂಪತ್ಯ ಸೂಚಕ ನವಾಂಶ ಕುಂಡಲಿಯ ಲಗ್ನವು ಧನು ಆಗಿದ್ದು ಲಾಭಾಂಶದಲ್ಲಿದೆ. ಲಗ್ನಾಧಿಪತಿ ಗುರು ಚಥುರ್ತದಲ್ಲಿ ಸ್ವಕ್ಷೇತ್ರದಲ್ಲಿ ಭಾಗ್ಯಾಧಿಪತಿ ರವಿಯೊಡನೆ ಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭಸ್ಥಿತರಿದ್ದಾರೆ. ಇದರಿಂದ ಇವರ ದಾಂಪತ್ಯ ಜೀವನವು ಸಾಧಾರಣ ವಾಗಿರುವುದು.

ಇದರಿಂದ ಸೂಕ್ತ ಪರಿಹಾರದ ನಂತರ ಇವರ ಮದುವೆ ನೆರವೇರುವುದು.
ಇವರಿಗೆ ಈಗ ರಾಹುದಶಾ ಶುಕ್ರ ಭುಕ್ತಿ ನಡೆಯುತ್ತಿದ್ದು, ಗೋಚಾರದಲ್ಲಿಸಾಡೇಸಾತಿ ಸಪ್ತಮ ಗುರು ಇದ್ದಾರೆ. ಇವು ಶುಭಾಶುಭಕರವಾಗಿದೆ. 2012 ರಲ್ಲಿಗುರುಬಲವಿರುವಾಗ ಇವರ ಮದುವೆ ನೆರವೇರುವುದು.
ಪರಿಹಾರ: ಝೆರ್ಕಾನ ಹರಳು ಧರಿಸಿ. ಗೌರಿಕಲ್ಯಾಣ ಮಾಡಿಸಿ. ರುದ್ರಾಷ್ಟೋತ್ತರ ಪಠಿಸಿ. ಗಣಪತಿಯನ್ನು ಪೂಜಿಸಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT