ಬೆಂಗಳೂರು: ಭಾರತ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ) ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ನಲ್ಲಿ ಉದ್ಯಾನನಗರಿಯಲ್ಲಿ ನಡೆಯಲಿರುವ ಅಂಧರ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಲಾಂಛನ ಹಾಗೂ ಚೆಂಡು ಅನಾವರಣ ಸಮಾರಂಭ ಶನಿವಾರ ನಡೆಯಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೂರ್ನಿಯ ಕಾರ್ಯಚಟುವಟಿಕೆಗಳಿಗೂ ಈ ವೇಳೆ ಚಾಲನೆ ದೊರೆಯಿತು.
ಸಿಎಬಿಐ ಅಧ್ಯಕ್ಷ ಎಸ್.ಪಿ. ನಾಗೇಶ್ ಮಾತನಾಡಿ, `ಅಂಧರ ವಿಶ್ವಕಪ್ ಟೂರ್ನಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ. ಅಂಧ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಈ ಟೂರ್ನಿ ವೇದಿಕೆಯಾಗಲಿದೆ~ ಎಂದು ಹೇಳಿದರು.
`ಅಂಗವಿಕಲರಾದರೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಕ್ರೀಡಾಪಟುಗಳ ಬಗ್ಗೆ ಹೆಮ್ಮೆ ಇದೆ. ಅವರ ಸಾಧನೆ ಇನ್ನಷ್ಟು ಎತ್ತರಕ್ಕೆ ಏರಲಿ~ ಎಂದು ಅಧಿಕೃತ ಲಾಂಛನ ಬಿಡುಗಡೆ ಮಾಡಿದ ಬೆಂಗಳೂರು ಮಹಾ ನಗರ ಪಾಲಿಕೆ ಮಹಾಪೌರರಾದ ಶಾರದಮ್ಮ ಹಾರೈಸಿದರು.
ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಭಾರತ, ಶ್ರೀಲಂಕಾ, ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗೂ ಇಂಗ್ಲೆಂಡ್ ಸೇರಿದಂತೆ ಒಟ್ಟು 10 ತಂಡಗಳು ಪಾಲ್ಗೊಳ್ಳಲಿವೆ.
`ಪ್ರಜಾವಾಣಿ~ ಸಹಾಯಕ ಸಂಪಾದಕ ಎಂ.ಎ. ಪೊನ್ನಪ್ಪ, ಸಮರ್ಥನಂ ಸಂಸ್ಥೆಯ ಟ್ರಸ್ಟಿ ಜಿ.ಕೆ. ಮಹಾಂತೇಶ್, ಮಾಜಿ ಕ್ರಿಕೆಟಿಗ ಸಯ್ಯದ್ ಕೀರ್ಮಾನಿ, ಟೂರ್ನಿಯ ರಾಯಭಾರಿ ನಟಿ ರಾಗಿಣಿ ಹಾಗೂ ಕರ್ನಾಟಕ ಅಂಗವಿಕಲರ ಇಲಾಖೆ ಆಯುಕ್ತ ಕೆ.ವಿ. ರಾಜಣ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಾರ್ಚ್ 3ರಿಂದ ಕ್ರಿಕೆಟ್ ಟೂರ್ನಿ: ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಟಿಇ ಕನೆಕ್ಟಿವಿಟಿ ಜಂಟಿಯಾಗಿ ಮಾರ್ಚ್ 3ರಿಂದ ಕಾರ್ಪೊರೇಟ್ ಸಂಸ್ಥೆಗಳಿಗೆ ಕ್ರಿಕೆಟ್ ಟೂರ್ನಿ ಆಯೋಜಿಸಿವೆ.
ಈ ಟೂರ್ನಿ ವಾರಂತ್ಯದ ದಿನಗಳಂದು ನಡೆಯುತ್ತದೆ. ಪ್ರತಿ ಪಂದ್ಯವು 10 ಓವರ್ಗಳಾಗಿದ್ದು, ನಾಕೌಟ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿದೆ. 20ಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳಲಿವೆ.
ವಿಜೇತ ತಂಡ 1 ಲಕ್ಷ ರೂಪಾಯಿ ಹಾಗೂ ರನ್ನರ್ ಅಪ್ ತಂಡ 50,000 ರೂಪಾಯಿ ಪ್ರಶಸ್ತಿ ಪಡೆಯಲಿವೆ. ಈ ಟೂರ್ನಿಯ ಉದ್ಘಾಟನೆಯೂ ಇದೇ ಸಂದರ್ಭದಲ್ಲಿ ಜರುಗಿತು.