ಉಳ್ಳಾಲ: ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಟಿಪ್ಪು ಸುಲ್ತಾನರ ಪಾತ್ರ ಸ್ಮರಣೀಯವಾಗಿದ್ದು, ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮಿಬ್ಬರು ಮಕ್ಕಳನ್ನು ಬಲಿದಾನ ಮಾಡಿದ ಧೀರರು ಅವರು. ಇಂದಿನ ಸನ್ನಿವೇಶದಲ್ಲಿ ಆವರ ನೆನಪು ಮಾಡುತ್ತಿರುವುದು ಶ್ಲಾಘನೀಯ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕರುಣಾಕರ ಉಚ್ಚಿಲ್ ಅಭಿಪ್ರಾಯಪಟ್ಟರು.
ಉಚ್ಚಿಲ ಬೋವಿ ಹಿ.ಪ್ರಾ. ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಶನಿವಾರ ನಡೆದ ಭಾರತ ಸ್ವಾತಂತ್ರ್ಯ ಸಂಗ್ರಾಮದ 150ನೇ ವರ್ಷಾಚರಣೆ ಮತ್ತು ಟಿಪ್ಪು ಸುಲ್ತಾನರ ಸ್ಮರಣಾರ್ಥ ಸಾಂಸ್ಕೃತಿಕ ಕಾರ್ಯಕ್ರಮಉದ್ಘಾಟಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಉಚ್ಚಿಲ್ ಆವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಯು.ಟಿ. ಖಾದರ್ ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನದಲ್ಲೇ ದೇಶ ಭಕ್ತಿಯ ಪಾಠವನ್ನು ಕಲಿಸಬೇಕು. ಈ ನಿಟ್ಟಿನಲ್ಲಿ ಆಧ್ಯಾಪಕರ ಪಾತ್ರ ಮಹತ್ವದ್ದಾಗಿದೆ ಎಂದರು.
ಸೊಮೇಶ್ವರ ಗ್ರಾ.ಪಂ. ಉಪಾಧ್ಯಕ್ಷ ರಮೇಶ್ ಕೊಲ್ಯ, ಜಿ.ಪಂ ಸದಸ್ಯ ಸತೀಶ್ ಕುಂಪಲ, ತಾ.ಪಂ ಸದಸ್ಯರಾದ ಧನ್ಯವತಿ, ದೇವಕಿ ರಾಘವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕಾತ ಚಿಕ್ಕಣ್ಣ, ಸಹನಿರ್ದೆಶಕಿ ಮಂಗಳಾ ವೆಂ.ನಾಯಕ್, ಶಾಲಾ ಮುಖ್ಯ ಶಿಕ್ಷಕ ಧರಣಪ್ಪ, ರಂಗ ನಿದೇರ್ಶಕ ಜಗನ್ ಪವರ್ ಬೇಕಲ್ ಉಪಸ್ಥಿತರಿದ್ದರು.