ಗುಲ್ಬರ್ಗ: ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಯು ಮತ್ತೊಬ್ಬ ಅಭ್ಯರ್ಥಿಯ ಡಮ್ಮಿ ಅಭ್ಯರ್ಥಿಯಾದರೆ ಅಂಥವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ ೧೭೧ ಎಚ್ ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶವಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರು ತಿಳಿಸಿದ್ದಾರೆ.
ಈ ರೀತಿ ಒಬ್ಬ ಡಮ್ಮಿ ಅಭ್ಯರ್ಥಿಯು ಮತ್ತೊಬ್ಬ ಅಭ್ಯರ್ಥಿಯ ಪರವಾಗಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಚುನಾವಣಾ ಸಮಯದಲ್ಲಿ ಮತ ಯಾಚಿಸಿದರೆ ಅಂತಹ ಡಮ್ಮಿ ಅಭ್ಯರ್ಥಿಯ ಖರ್ಚು ವೆಚ್ಚವನ್ನು ಮೂಲ ಅಭ್ಯರ್ಥಿಯ ಖರ್ಚು ವೆಚ್ಚಕ್ಕೆ ಸೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರು ಇಂತಹ ಚುನಾವಣಾ ಅಕ್ರಮ ಕಂಡು ಬಂದಲ್ಲಿ ಹತ್ತಿರದ ಸಹಾಯಕ ಚುನಾವಣಾಧಿಕಾರಿ, ತಹಶೀಲ್ದಾರ್, ಪೋಲಿಸ್ ಅಧಿಕಾರಿ, ಕಂಟ್ರೋಲ್ ರೂಂ ಅಥವಾ ಚುನಾವಣೆಗೆ ಸಂಬಂಧಿಸಿದ ಯಾವುದೇ ಅಧಿಕಾರಿಗೆ ಮಾಹಿತಿ ನೀಡಲು ಕೋರಿದ್ದಾರೆ.
ಇಂತಹ ಡಮ್ಮಿ ಅಭ್ಯರ್ಥಿಗಳ ಎಲ್ಲಾ ಚುನಾವಣಾ ಸಂಬಂಧಿತ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾ ಇಡಲಾಗುವುದು ಮತ್ತು ವಿಡಿಯೋಗ್ರಾಫಿ ಕೂಡ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಅಂಚೆ ಮತಪತ್ರ ವಿತರಣೆ
ಗುಲ್ಬರ್ಗ: ಗುಲ್ಬರ್ಗಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ ೧೭ರಂದು ನಡೆಯುವ ಚುನಾವಣೆಯ ಮತದಾನ ಕರ್ತವ್ಯದಲ್ಲಿ ನಿರತರಾಗಿರುವ ಅಧಿಕಾರಿ/ಸಿಬ್ಬಂದಿ ತಮ್ಮ ಮತ ಚಲಾಯಿಸಲು ಅನುಕೂಲ ಕಲ್ಪಿಸುವ ನಿಟ್ಟನಲ್ಲಿ ಚುನಾವಣಾ ಕೆಲಸ ನಿರ್ವಹಿಸುವ ಕ್ಷೇತ್ರದ ಆಧಾರದ ಮೇಲೆ ಅಂಚೆ ಮತಪತ್ರ ನಿಮಿತ್ತ ನಮೂನೆ-೧೨, ಇಡಿಸಿ(ನಮೂನೆ-೧೨ಎ)ಗಳನ್ನು ಕರ್ತವ್ಯ ನಿಯೋಜನೆ ಆದೇಶದೊಂದಿಗೆ ನೀಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರು ತಿಳಿಸಿದ್ದಾರೆ.ಎಲ್ಲಾ ಸರ್ಕಾರಿ ನೌಕರರು ಮತದಾರರ ಯಾದಿಯಲ್ಲಿ ತಮ್ಮ ಹೆಸರು, ಭಾಗಸಂಖ್ಯೆ ಹಾಗೂ ಕ್ರಮಸಂಖ್ಯೆಯನ್ನು ಕಡ್ಡಾ-ಯವಾಗಿ ಕೂಡಲೇ ಪರಿಶೀಲಿಸಿಟ್ಟುಕೊಂಡು ಪ್ರಥಮ ತರಬೇತಿಯ ದಿನಾಂಕದೊಳಗೆ ಸಂಬಂಧಿಸಿದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತಹಸೀಲ್ದಾರ್ ಕಚೇರಿಯ ಚುನಾವಣಾ ಶಾಖೆಯಲ್ಲಿ ಸಲ್ಲಿಸಬೇಕು. ಅನಂತರ ಬರುವ ಅರ್ಜಿಗಳನ್ನು ಮಾನ್ಯ ಮಾಡುವುದಿಲ್ಲವೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.