ಕಮಲನಗರ: ಕನ್ನಡದ ಕಟ್ಟಾಳು, ನಡೆದಾಡುವ ದೇವರೆಂದೇ ಹೆಸರಾಗಿದ್ದ ಭಾಲ್ಕಿ ಮಠದ ಲಿಂಗೈಕ್ಯ ಸ್ವಾಮಿಗಳಾದ ಡಾ.ಚನ್ನಬಸವ ಪಟ್ಟದ್ದೇವರ ಪ್ರತಿಮೆಯನ್ನು ಅವರ ಹುಟ್ಟೂರಾದ ಕಮಲನಗರದಲ್ಲಿ ಬುಧವಾರ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅನಾವರಣಗೊಳಿಸಿದರು.
ಇಂದಿರಾಬಾಯಿ ಗಾಯಕವಾಡ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಪ್ರಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಳಿಕ ಮಾತನಾಡಿದ ಅವರು, `ಕಾಯಕ, ದಾಸೋಹ ತತ್ವಗಳನ್ನು ಮೈಗೂಡಿಸಿಕೊಂಡು, ಸತ್ಯವಾದ ರೀತಿಯಲ್ಲಿ ಜಗತ್ತಿಗೆ ಬದುಕಿ ತೋರಿದ ಚೇತನ ಡಾ.ಚನ್ನಬಸವ ಪಟ್ಟದ್ದೇವರು' ಎಂದು ಬಣ್ಣಿಸಿದರು.
ಪ್ರತಿಮೆ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡ ಟ್ರಸ್ಟ್ನ ಅಧ್ಯಕ್ಷ ದಿಲೀಪ ಗಾಯಕವಾಡ ಅವರ ಕಾರ್ಯ ಇತರರಿಗೆ ಮಾದರಿ. ಪಟ್ಟದ್ದೇವರ ಹುಟ್ಟೂರಲ್ಲಿ ಪ್ರತಿಮೆ ನಿರ್ಮಾಣವಾಗಿದ್ದು ತುಂಬಾ ಹೆಮ್ಮೆಯ ಸಂಗತಿಯಾಗಿದೆ ಎಂದು ಶ್ಲಾಘಿಸಿದರು.
ಶಾಸಕ ಈಶ್ವರ ಖಂಡ್ರೆ ಮಾತನಾಡಿದರು. ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು, ಅಕ್ಕ ಅನ್ನಪೂರ್ಣ, ಸಂಸತ್ ಸದಸ್ಯ ಎನ್.ಧರ್ಮ ಸಿಂಗ್, ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ, ಮಾಜಿ ಸಂಸತ್ ಸದಸ್ಯ ನರಸಿಂಗರಾವ ಸೂರ್ಯವಂಶಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ ಮತ್ತಿತರ ಪ್ರಮುಖರು ಹಾಜರಿದ್ದರು.