ಅಮೃತಸರ (ಪಿಟಿಐ): ಆಟೊ ಚಾಲಕ ನೊಬ್ಬ ಸಂಶೋಧನೆಗಾಗಿ ಬಂದ ಡೆನ್ಮಾರ್ಕ್ ವಿದ್ಯಾರ್ಥಿನಿಯ ಮಾನ ಭಂಗಕ್ಕೆ ಯತ್ನಿಸಿದ ಘಟನೆ ಇಲ್ಲಿನ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ವಿಕ್ಕಿ ಕುಮಾರ್ ಎಂಬಾತ ಈ ಪ್ರಕರಣದ ಆರೋಪಿಯಾಗಿದ್ದು, ಸ್ಥಳೀಯ ನಿವಾಸಿಯಾಗಿದ್ದಾನೆ. ಈತನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ವಿವಿಧ ಧರ್ಮಗಳ ಹುಟ್ಟು, ಆಚರಣೆ ಕುರಿತಾಗಿ ಸಂಶೋಧನೆ ಮಾಡಲೆಂದು ವಿದ್ಯಾರ್ಥಿನಿ ಶುಕ್ರವಾರ ರಾತ್ರಿ ಅಮೃತಸರ ನಗರಕ್ಕೆ ಬಂದ್ದ್ದಿದಳು.
ಆಕೆ ರೈಲ್ವೆ ನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ ಆರೋಪಿಯು ಏಕಾಏಕಿ ಆಕೆಯ ಮೇಲೆ ಎರಗಿ ಬಟ್ಟೆಯನ್ನು ಹರಿದು ಹಾಕುವಾಗ ಆಕೆ ಜೋರಾಗಿ ಕಿರುಚಿದ್ದಾಳೆ. ಆಗ ಅವನು ಓಡಿ ಹೋಗಲು ಯತ್ನಿಸಿದ್ದ ಎಂದು ಸಹಾಯಕ ಪೊಲೀಸ್ ಅಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ.
ದೆಹಲಿಯಲ್ಲಿರುವ ಡೆನ್ಮಾರ್ಕ್ ರಾಯಭಾರ ಕಚೇರಿಗೆ ವಿದ್ಯಾರ್ಥಿನಿ ಕೈಯಲ್ಲಿ ಪ್ರಾಥಮಿಕ ತನಿಖಾ ವರದಿಯನ್ನು ಕಳುಹಿಸಲಾಗಿದ್ದು, ಭಾನುವಾರ ಬೆಳಿಗ್ಗೆ ಆಕೆ ಡೆನ್ಮಾರ್ಕ್ಗೆ ವಾಪಸ್ಸಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಹಿಂದೆಯೂ ನಗರಕ್ಕೆ ಬರುತ್ತಿದ್ದ ಮಹಿಳೆಯರಿಗೆ ಇದೇ ರೀತಿ ಮಾನಭಂಗ ಮಾಡಿರುವ ಪ್ರಕರಣಗಳಲ್ಲಿ ಈ ಆರೋಪಿಯ ಹೆಸರೂ ಇದೆ. ಹಾಗಾಗಿ ಕೆಲವು ಪ್ರಕರಣಗಳಲ್ಲಿ ಈತ ಬೇಕಾಗಿದ್ದ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.