ಲಖನೌ (ಪಿಟಿಐ): 25 ವರ್ಷದ ಯುವತಿಯೊಬ್ಬಳು ಆಕೆಯ ತಂದೆ ಹಾಗೂ ಕಿರಿಯ ಸಹೋದರನಿಂದಲೇ ಸತತ ಒಂಬತ್ತು ವರ್ಷಗಳಿಂದ ಅತ್ಯಾಚಾರಕ್ಕೆ ಒಳಗಾಗಿರುವ ಅಮಾನವೀಯ ಘಟನೆ ಇಲ್ಲಿನ ಕೃಷ್ಣಾನಗರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಬುಧವಾರ ನಡೆಸಿದ ಜನತಾದರ್ಶನ ಕಾರ್ಯಕ್ರಮದಲ್ಲಿ ಈ ಕುರಿತು ದೂರು ನೀಡಿದ ಯುವತಿ, `ನನ್ನ ಮೇಲೆ ನಡೆದಿರುವ ಅತ್ಯಾಚಾರಕ್ಕೆ ತಾಯಿಯೂ ಸಮ್ಮತಿ ಸೂಚಿಸಿದ್ದಳು' ಎಂದು ಆರೋಪಿಸಿದಳು. ಬಳಿಕ ಯುವತಿ ಸ್ಥಳೀಯ ಠಾಣೆಗೆ ದೂರು ನೀಡಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಯುವತಿಯ 57 ವರ್ಷದ ತಂದೆ ಹಾಗೂ 23 ವರ್ಷದ ಸಹೋದರನನ್ನು ಹಾಗೂ ಕೃತ್ಯಕ್ಕೆ ಸಹಕರಿಸಿದ ತಾಯಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ಬ್ಯೂಟಿಪಾರ್ಲರ್ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿರುವುದಲ್ಲದೇ, ಆರೋಪಿಗಳು ಹಲವು ಬಾರಿ ಒತ್ತಾಯಪೂರ್ವಕವಾಗಿ ಗರ್ಭಪಾತ ಮಾಡಿಸಿದ್ದಾರೆ. ವಿಷಯವನ್ನು ಬಹಿರಂಗಗೊಳಿಸದಂತೆ ಯುವತಿಗೆ ಬೆದರಿಕೆ ಹಾಕಿದ್ದಾರೆ. ತಾನು 16 ವರ್ಷದವಳಾಗಿದ್ದಾಗಿನಿಂದಲೂ ಸತತವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.