ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಶನಿವಾರ (ಅ.20)ದಿಂದ 3 ದಿನಗಳ ಕಾಲ ನಡೆಯುವ ದಸರಾ ಉತ್ಸವದ ಆಹ್ವಾನ ಪತ್ರಿಕೆ ಕಾರ್ಯಕ್ರಮಕ್ಕೆ ಎರಡು ದಿನಗಳು ಬಾಕಿ ಇರುವಾಗ ಅಧಿಕಾರಿಗಳ ಕೈ ಸೇರಿದೆ.
ಗುರುವಾರ ಸಂಜೆ ಆಹ್ವಾನ ಪತ್ರಿಕೆ ಹಂಚುವ ಕೆಲಸ ಶುರುವಾಯಿತು. ಇನ್ನು ಕಲಾವಿದರು, ಗ್ರಾಮ ಪಂಚಾಯಿತಿಗಳು, ಸರ್ಕಾರಿ ಕಚೇರಿಗಳು, ವಿವಿಧ ಸಂಘ-ಸಂಸ್ಥೆಗಳಿಗೆ ಆಹ್ವಾನ ಪತ್ರಿಕೆ ಹೇಗೆ ತಲುಪಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದವು. ದಸರಾ ಆಚರಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಇದುವರೆಗೆ 6 ಸಭೆಗಳು ನಡೆದಿವೆ. ಸೆ.21ರಂದು ಮೊದಲ ಸಭೆ ಶ್ರೀರಂಗನಾಥ ಕಲ್ಯಾಣ ಮಂಟಪದಲ್ಲಿ ನಡೆದಿತ್ತು. ನಂತರ ಅ.8, 10, 16, 17 ಹಾಗೂ 18ರಂದು ಪೂರ್ವ ಸಿದ್ಧತಾ ಸಭೆಗಳು ನಡೆದಿವೆ. ಇಷ್ಟಾದರೂ ಸಕಾಲಕ್ಕೆ ಆಹ್ವಾನ ಪತ್ರಿಕೆ ಮುದ್ರಿಸಿ ಹಂಚದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.
ಎರಡು ಪತ್ರಿಕೆ: ಪಟ್ಟಣದಲ್ಲಿ ನಡೆಯುವ ದಸರಾ ಉತ್ಸವಕ್ಕೆ ಎರಡು ಆಹ್ವಾನ ಪತ್ರಿಕೆ ಮುದ್ರಿಸಲಾಗಿದೆ. ಒಂದು ಪತ್ರಿಕೆಯಲ್ಲಿ ಸಹಕಾರ ಸಚಿವ ಬಿ.ಜೆ.ಪುಟ್ಟಸ್ವಾಮಿ ಅವರ ಹೆಸರು ಇಲ್ಲ ಎಂಬ ಕಾರಣಕ್ಕೆ ಮತ್ತೊಂದು ಪತ್ರಿಕೆ ಮುದ್ರಿಸಿ ಹಂಚಲಾಗಿದೆ.
`ಸಚಿವರಾದ ಬಿ.ಜೆ.ಪುಟ್ಟಸ್ವಾಮಿ ಅವರು ಕಡೇ ಗಳಿಗೆಯಲ್ಲಿ ಶ್ರೀರಂಗಪಟ್ಟಣದಲ್ಲಿ ನಡೆಯುವ ದಸರಾ ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದರು. ಹಾಗಾಗಿ ಆಹ್ವಾನ ಪತ್ರಿಕೆ ಬದಲಿಸುವುದು ಅನಿವಾರ್ಯವಾಯಿತು~ ಎಂದು ತಹಶೀಲ್ದಾರ್ ಅರುಳ್ಕುಮಾರ್ ಹೇಳಿದ್ದಾರೆ.