ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ
ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ‘ಸ್ಪಾಟ್ ಫಿಕ್ಸಿಂಗ್’ ಮತ್ತು ಬೆಟ್ಟಿಂಗ್ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಮಿತಿಯ ಮುಂದೆ ಹಾಜರಾಗಿದ್ದಾರೆ.
ನಿವೃತ್ತಿ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ನೇತೃತ್ವದ ಸಮಿತಿ ಇದೇ ವೇಳೆ ಬಿಸಿಸಿಐ ಮಾಜಿ ಅಧ್ಯಕ್ಷ ಐ.ಎಸ್. ಬಿಂದ್ರಾ ಮತ್ತು ವಕೀಲ ರಾಹುಲ್ ಮೆಹ್ರಾ ಅವರಿಂದಲೂ ಮಾಹಿತಿ ಕಲೆಹಾಕಿದೆ.
ಈ ನಾಲ್ಕು ಮಂದಿ ಜನವರಿ 4 ಮತ್ತು 6ರಂದು ತನಿಖಾ ಸಮಿತಿಯ ಮುಂದೆ ಹಾಜರಾಗಿದ್ದಾರೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ತನಿಖಾ ಸಮಿತಿ ಇದೇ ತಿಂಗಳ 16 ಮತ್ತು 17 ರಂದು ಕೋಲ್ಕತ್ತ ಹಾಗೂ 18 ಮತ್ತು 19 ರಂದು ಬೆಂಗಳೂರಿಗೆ ತೆರಳಲಿದೆ ಎಂದು ಮಂಡಳಿ ಹೇಳಿದೆ.
ಈ ಬಗ್ಗೆ ಬಿಂದ್ರಾ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ‘ಇದು ನ್ಯಾಯಾಂಗ ತನಿಖೆಯಾಗಿರುವ ಕಾರಣ ನಾನು ಈಗ ಏನನ್ನೂ ಹೇಳುವುದಿಲ್ಲ. ಸಮಿತಿಯು ತನ್ನ ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಲಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.