`ಪ್ರೀತಿಸಿ...~ ಚಿತ್ರೀಕರಣ ಪೂರ್ಣ
ಕುಮಾರ್ ಗೋವಿಂದ್ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿರುವ `ಪ್ರೀತಿಸಿ ಹೊರಟವಳೇ~ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು ಶೀಘ್ರದಲ್ಲೇ ಪ್ರಥಮ ಪ್ರತಿ ಸಿದ್ಧವಾಗಲಿದೆ. ತ್ರಿಕೋನ ಪ್ರೇಮಕಥೆಯ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಗೌತಮ್ ಶ್ರೀನಿವಾಸ್ ಸಂಗೀತ ನೀಡಿದ್ದಾರೆ. ಕುಮಾರ್ ಗೋವಿಂದ್, ಡಿಂಪಲ್, ಪದ್ಮಾವಾಸಂತಿ, ಸುಂದರರಾಜ್, ಬ್ಯಾಂಕ್ ಜನಾರ್ದನ್ ನಟಿಸಿದ್ದಾರೆ. ಊಟಿ, ಕುಂದಾಪುರ, ನಂದಿ, ಬೆಂಗಳೂರು ಮುಂತಾದೆಡೆ ಚಿತ್ರೀಕರಣ ನಡೆಸಲಾಗಿದೆ.
`ಅಲೆಮಾರಿ~ ಚಿತ್ರೀಕರಣ
ಲೂಸ್ ಮಾದ ಯೋಗೀಶ್ ನಾಯಕರಾಗಿ ನಟಿಸುತ್ತಿರುವ `ಅಲೆಮಾರಿ~ ಚಿತ್ರದ ಹಾಡು ಮತ್ತು ಸನ್ನಿವೇಶಗಳ ಚಿತ್ರೀಕರಣ ಬೆಂಗಳೂರಿನ ಕೆಲವು ರಸ್ತೆ ಮತ್ತು ಮನೆಗಳಲ್ಲಿ ನಡೆಯಿತು. ಚಿತ್ರಕ್ಕಾಗಿ ಚಿತ್ರತಂಡ ವಿವಿಧ ಪ್ರದೇಶಗಳಿಗೆ ಸಂಚರಿಸಲಿದೆ.
ನಾಯಕ ಪ್ರೀತಿಯನ್ನು ಅರಸುತ್ತ ಊರೂರು ಅಲೆಯುವಾಗ ನಡೆಯುವ ಘಟನಾವಳಿಗಳ ಕಥೆಯ ಎಳೆಯನ್ನು ಈ ಚಿತ್ರ ಹೊಂದಿದೆ. ಸಂತು ಮೊದಲ ಬಾರಿಗೆ ಈ ಚಿತ್ರದ ಮೂಲಕ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಬಿ.ಕೆ.ಶ್ರೀನಿವಾಸ್ ಚಿತ್ರದ ನಿರ್ಮಾಪಕರು. ರಾಧಿಕಾ ಪಂಡಿತ್ ಚಿತ್ರದ ನಾಯಕಿ. ಮಂಜುನಾಥ್ ನಾಯಕ್ ಛಾಯಾಗ್ರಹಣ ಮಾಡಿದ್ದಾರೆ.
ಮಂಜು ಮಾಂಡವ್ಯ ಸಂಭಾಷಣೆ ರಚಿಸಿದ್ದಾರೆ. ರವಿವರ್ಮ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ರಂಗಾಯಣ ರಘು, ಆದಿ ಲೋಕೇಶ್, ರಾಕೇಶ್, ಉಮಾಶ್ರೀ, ರಮೇಶ್ ಭಟ್, ರಘುರಾಂ, ರಮೇಶ್ ಪಂಡಿತ್ ಮೊದಲಾದವರು ಚಿತ್ರದಲ್ಲಿದ್ದಾರೆ.