ರಾಯಚೂರು: ನೂತನ ತರಕಾರಿ ಮಾರುಕಟ್ಟೆ ನಿರ್ಮಾಣ ಕಾರ್ಯವನ್ನು ಕೂಡಲೇ ಆರಂಭಿಸಬೇಕು, ತರಕಾರಿ ಮಾರಾಟಗಾರರ ಬೇಡಿಕೆಗೆ ಈವರೆಗೂ ಸ್ಪಂದಿಸದ ನಗರಸಭೆ ಅಧ್ಯಕ್ಷೆ ರಾಜೀನಾಮೆ ನೀಡಬೇಕು, ನಗರಸಭೆ ಆರೋಗ್ಯಾಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ತರಕಾರಿ ಮಾರಾಟಗಾರರು ನಗರಸಭೆ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಮುಂಜಾನೆ ನಗರಸಭೆಗೆ ನುಗ್ಗಿ ಮುತ್ತಿಗೆ ಹಾಕಲು ತರಕಾರಿ ಮಾರಾಟಗಾರರು ಪ್ರಯತ್ನಿಸಿದಾಗ ಪೊಲೀಸರು ತಡೆದರು. ನಗರಸಭೆ ಅಧ್ಯಕ್ಷರು, ನಗರಸಭೆ ಆರೋಗ್ಯಾಧಿಕಾರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಪ್ರಭಾರ ಆಯುಕ್ತರು ಹಾಗೂ ಸಹಾಯಕ ಆಯುಕ್ತರಾದ ಮಂಜುಶ್ರೀ ಸ್ಥಳಕ್ಕೆ ಕೂಡಲೇ ಧಾವಿಸಬೇಕು. ತಮ್ಮ ಸಮಸ್ಯೆ ಪರಿಹರಿಸಬೇಕು ಎಂದು ಪಟ್ಟು ಹಿಡಿದು ಧರಣಿ ನಡೆಸಿದರು. ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್ ಮಹಾವೀರ, ಕಾರ್ಯದರ್ಶಿ ಪ್ರಭು ನಾಯಕ ಪ್ರತಿಭಟನೆಯಲ್ಲಿ ಇದ್ದರು.