ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ತಹಶೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ'

`ಅಟಲ್‌ಜೀ ಜನ ಸ್ನೇಹಿ ಕೇಂದ್ರ'ಕ್ಕೆ ಸಚಿವರ ಚಾಲನೆ
Last Updated 26 ಡಿಸೆಂಬರ್ 2012, 5:52 IST
ಅಕ್ಷರ ಗಾತ್ರ

ಕೋಲಾರ: ನಗರದ ತಹಶೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಲಂಚ ನೀಡದೆ ಜನರ ಕೆಲಸ ಆಗುವುದೇ ಇಲ್ಲ ಎಂಬ ಸನ್ನಿವೇಶ ನಿರ್ಮಾಣವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವರ್ತೂರು ಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆಯಿತು.
ನಗರದ ತಹಶೀಲ್ದಾರ್ ಕಚೇರಿ ಆವರಣದಲ್ಲಿ `ಅಟಲ್‌ಜೀ ಜನಸ್ನೇಹಿ ಕೇಂದ್ರ'ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರ ಸಂತೆ ಕಡಿಮೆ ಮಾಡಲು ಆಗುತ್ತಿಲ್ಲ. ಎಲ್ಲೆಡೆ ಭ್ರಷ್ಟತೆ ತುಂಬಿದೆ, ರೈತರನನ್ನು ಅಲೆಸುವ ಕೆಲಸ ನಡೆಯುತ್ತಿದೆ ಎಂದು ಕಿಡಿಕಾರಿದರು.

ತಹಶೀಲ್ದಾರ್ ಕಚೇರಿ ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸವನ್ನು ಜಿಲ್ಲಾಧಿಕಾರಿ ನಾಳೆಯಿಂದಲೇ ಆರಂಭಿಸಬೇಕು. ವಿಧವೆ, ಅಂಗವಿಕಲ, ವೃದ್ಧಾಪ್ಯ ವೇತನ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಮಹಾತ್ಮ ಗಾಂಧೀಜಿ ನಂತರ ದೇಶ ಕಂಡ ಅಪ್ರತಿಮ ನಾಯಕ ಅಟಲ್‌ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ಜನರಿಗೆ ಸೇವೆಗಳನ್ನು ನಿಗದಿತ ಅವಧಿಯೊಳಗೆ ತಲುಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಸರ್ಕಾರ ಎಷ್ಟೇ ಕಠಿಣ ಕಾನೂನು ತಂದರೂ ಅದನ್ನು ಸಮರ್ಥವಾಗಿ ಜನರಿಗೆ ತಲುಪಿಸುವಲ್ಲಿ ಅಧಿಕಾರಿ-ನೌಕರರ ಪ್ರಾಮಾಣಿಕ ಪ್ರಯತ್ನ ಅಗತ್ಯ. ಸರಿಯಾಗಿ ಕೆಲಸ ಮಾಡದವರನ್ನು ಜಿಲ್ಲಾಧಿಕಾರಿಗಳು ಸರಿಪಡಿಸಬೇಕು ಎಂದರು.

ಸರ್ವೇ ಇಲಾಖೆಯಲ್ಲೂ ಖಾಲಿ ಇರುವ ಹುದ್ದೆಗಳಿಗೆ ಸಿಬ್ಬಂದಿಯನ್ನು ತುಂಬಲಾಗಿದೆ. ಆದರೆ ರೈತರು ಜಮೀನುಗಳ ಅಳತೆಗೆ ಒಂದು ವರ್ಷದ ಹಿಂದೆ ಸಲ್ಲಿಸಿರುವ ಅರ್ಜಿಗಳು ವಿಲೇವಾರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಭಾಗಾಧಿಕಾರಿಗಳಾಗಿ ಬಡ್ತಿ ಪಡೆದ ತಹಶೀಲ್ದಾರ್‌ಗಳಾದ ವಿ.ವೆಂಕಟೇಶಮೂರ್ತಿ, ಎಸ್.ಎಂ.ಮಂಗಳಾ, ನಾಗರಾಜ್, ಜಯಮಾಧವ್ ಅವರನ್ನು ಸಚಿವರು ಅಭಿನಂದಿಸಿದರು.

`ಅಟಲ್‌ಜೀ ಜನಸ್ನೇಹಿ ಕೇಂದ್ರ'ದ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್, ರಾಜ್ಯ ಸರ್ಕಾರ 30 ಇಲಾಖೆಗಳ 260 ಸೇವೆಗಳನ್ನು ಈ ವ್ಯಾಪ್ತಿಗೆ ತಂದಿದ್ದು, ನಿಗದಿತ ಅವಧಿಯೊಳಗೆ ಅರ್ಜಿಗಳನ್ನು ವಿಲೇವಾರಿ ಮಾಡಿ ಸೇವೆ ಒದಗಿಸುವ ಹೊಣೆ ತಹಶೀಲ್ದಾರ್‌ಗಳ ಮೇಲಿದೆ ಎಂದರು.

ಜಿಲ್ಲೆಯಲ್ಲಿ 27 ಕೇಂದ್ರಗಳು ನಾಳೆಯಿಂದಲೆ ಕೆಲಸ ಆರಂಭಿಸಲಿವೆ. ಹಿಂದೆ ಸಕಾಲದಲ್ಲಿ ಹೊರ ಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದುದರಿಂದಾಗಿ ಸಮರ್ಪಕ ನಿರ್ವಹಣೆ ಇಲ್ಲ ಎಂಬ ದೂರಿತ್ತು. ಆದರೆ ಇದೀಗ 12 ಮಂದಿ ಗಣಕ ತಂತ್ರಜ್ಞಾನದ ಅರಿವು ಹೊಂದಿದ ಗ್ರಾಮ ಲೆಕ್ಕಿಗರನ್ನು ಈ ಕಾರ್ಯಕ್ಕೆ ನೇಮಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಝುಲ್ಫಿಕರ್ ಉಲ್ಲಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಎಸ್.ಪೆದ್ದಪ್ಪಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಉಪವಿಭಾಗಾಧಿಕಾರಿ ಆಯೀಷಾ ಪರ್ವೀನ್, ಜಿಲ್ಲಾ ವಾರ್ತಾಧಿಕಾರಿ ಸಿ.ಎಂ.ರಂಗಾರೆಡ್ಡಿ, ನಗರ ಆಶ್ರಯ ಸಮಿತಿ ಅಧ್ಯಕ್ಷ ಕೆ.ವಿ.ಸುರೇಶ್ ಕುಮಾರ್, ವಿವಿಧ ತಾಲ್ಲೂಕುಗಳ ತಹಸೀಲ್ದಾರರು, ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT