ಹೊಸನಗರ: ತಾಲ್ಲೂಕಿನ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ತಾ.ಪಂ. ನೂತನ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ ಮನವಿ ಮಾಡಿದರು. ಶುಕ್ರವಾರ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಪ್ರಥಮ ತ್ರೈಮಾಸಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರೋಗ್ಯ ಇಲಾಖೆಗೆ ತಗುಲಿದ ರೋಗದಿಂದ ಮುಕ್ತಿಗೊಳಿಸಬೇಕು. ಹೊಸನಗರ, ರಿಪ್ಪನ್ಪೇಟೆ ಸಾರ್ವಜನಿಕ ಆಸ್ಪತ್ರೆ ಅದ್ವಾನಗಳ ಆಗರ ಆಗಿದೆ. ಎನ್ಆರ್ಎಚ್ಎಂ ಯೋಜನೆ ದುರುಪಯೋಗ ಆಗುತ್ತಿದೆ. ಮಾಡಿದ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸದಸ್ಯರು ಒತ್ತಾಯಿಸಿದರು.
ಇಲಾಖೆಗಳ ಪ್ರಗತಿ ವರದಿಯು 1 ವಾರ ಮುಂಚಿತವಾಗಿ ತಲುಪಿಸುವಂತೆ ಸದಸ್ಯರು ಮನವಿ ಮಾಡಿದರು. ಸಾಮಾನ್ಯ ಸ್ಥಾಯಿಸಮಿತಿಯೂ ಸೇರಿದಂತೆ ಎಲ್ಲಾ ಮೂರು ಸಮಿತಿಗಳನ್ನು ರಚಿಸಲು ಅಧ್ಯಕ್ಷರಿಗೆ ಸದಸ್ಯರು ಅನುಮತಿ ನೀಡಿದರು.
ಮಾಸ್ತಿಕಟ್ಟೆ-ಯಡೂರು-ತೀರ್ಥಹಳ್ಳಿ ರಸ್ತೆ ಹದಗೆಟ್ಟಿದೆ. ಯಡೂರು ಸರ್ಕಾರಿ ಆಸ್ಪತ್ರೆಯ ಎಎನ್ಎಂ ರೋಗಿಗಳ ಜತೆ ಸಜ್ಜನಿಕೆಯಿಂದ ವರ್ತಿಸುತ್ತಿಲ್ಲ. ಯಡೂರು ಪಶುವೈದ್ಯ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಪಶು ಪರಿವೀಕ್ಷಕರು ಇಲ್ಲ. ಕೇವಲ ಡಿ. ಗ್ರೂಪ್ ನೌಕರರು ಮಾತ್ರ ಇದ್ದಾರೆ. ಕೂಡಲೇ, ಹುದ್ದೆಗಳ ನೇಮಕಾತಿ ಮಾಡುವಂತೆ ಸದಸ್ಯ ಮಂಜುನಾಥಗೌಡ ಮನವಿ ಮಾಡಿದರು.
170 ಹಳ್ಳಿಗಳ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆ ಶೇಕಡಾ ನೂರು ಅನುಷ್ಠಾನ ಆಗದಿದ್ದರೂ ಸರ್ಕಾರಿ ಲೆಕ್ಕದಲ್ಲಿ ಸಂಪೂರ್ಣ ಆಗಿದೆ ಎಂದು ವರದಿ ಸಲ್ಲಿಸಿದ ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಮೇಲೆ ಎಲ್ಲಾ ಸದಸ್ಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.