ತಿರುಪತಿ (ಪಿಟಿಐ): ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಅವರು ಶನಿವಾರ ನಸುಕಿನಲ್ಲಿ ತಿರುಮಲದಲ್ಲಿರುವ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಬಿಳಿ ಶರ್ಟ್ ಹಾಗೂ ಪಂಚೆ ಧರಿಸಿದ್ದ ತೆಂಡೂಲ್ಕರ್ ಸಾಂಪ್ರದಾಯಿಕ ರೀತಿಯಲ್ಲಿ ಪೂಜೆ ಸಲ್ಲಿಸಿದರು. `ಸುಪ್ರಭಾತ ಪಠಣ ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು ಎಂದು ದೇವಾಲಯದ ಮೂಲಗಳು ತಿಳಿಸಿವೆ. ಅವರು ದೇವಾಲಯದಲ್ಲಿ 20 ನಿಮಿಷ ಇದ್ದರು. ಸಚಿನ್ ಮಧ್ಯ ರಾತ್ರಿಯೇ ತಿರುಮಲಕ್ಕೆ ಆಗಮಿಸಿದ್ದರು. ಅವರನ್ನು ಟಿಟಿಡಿ ಮುಖ್ಯಸ್ಥ ಬಾಪಿರಾಜು ಬರಮಾಡಿಕೊಂಡರು.
ಪೂಜೆ ಸಲ್ಲಿಸಿದ ಬಳಿಕ ತೆಂಡೂಲ್ಕರ್ ಅವರಿಗೆ ಪವಿತ್ರ ನೀರು, ಪವಿತ್ರ ರೇಷ್ಮೆ ಬಟ್ಟೆ ಹಾಗೂ ಲಡ್ಡು ನೀಡಲಾಯಿತು. ಬಳಿಕ ಪುರೋಹಿತರು ಪ್ರಾಚೀನ ರಂಗನಾಯಕ ಮಂಟಪದಲ್ಲಿ ಪಠಣ ವೈದಿಕ ಮಂತ್ರ ಹೇಳಿ ಸಚಿನ್ ಅವರನ್ನು ಆಶೀರ್ವದಿಸಿದರು.