ಬೆಂಗಳೂರು: ತುರ್ತು ಸಂದರ್ಭಗಳ ನಿರ್ವಹಣೆಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದರು.
ಗೃಹ ರಕ್ಷಕ, ಪೌರರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿರ್ದೇಶನಾಲಯವು ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ವಿಪತ್ತು ಕಡಿತ ದಿನಾಚರಣೆ ಮತ್ತು ರ್್ಯಾಲಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಬ್ರಿಟೀಷರು ಆರಂಭಿಸಿದ ಪೌರ ರಕ್ಷಣಾ ಪಡೆಗಳನ್ನು ನಾವು ಅದೇ ಸ್ವರೂಪದಲ್ಲಿಯೆ ಉಳಿಸಿಕೊಂಡಿದ್ದೇವೆ. ಅವುಗಳನ್ನು ಈಗಿನ ಅಗತ್ಯಗಳಿಗೆ ಪೂರಕವಾಗಿ ಆಧುನೀಕರಿಸಬೇಕು. ಮೂಲ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ನಾಗರಿಕರಲ್ಲಿ ಅರಿವು ಮೂಡಿಸಬೇಕು’ ಎಂದರು.
‘ಪೌರ ರಕ್ಷಣೆಯೂ ಸೇನಾ ಪಡೆಗಳಷ್ಟೆ ಮಹತ್ವ ಹೊಂದಿದೆ. ಸರ್ಕಾರಿ ಸಂಸ್ಥೆಗಳು, ಸರ್ಕಾರೇತರ ಸಂಘಟನೆಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಪೌರ ರಕ್ಷಣೆಯ ಜವಾಬ್ದಾರಿ ವಹಿಸಿಕೊಂಡಾಗ ಮಾತ್ರ ವಿಪತ್ತುಗಳನ್ನು ಎದುರಿಸಲು ಸಾಧ್ಯ’ ಎಂದರು.
ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಮಾತನಾಡಿ, ‘ಪ್ರಾಕೃತಿಕ ವಿಕೋಪ, ಬೆಂಕಿ ಅವಘಡ, ಕಟ್ಟಡ ಕುಸಿತ ಮುಂತಾದ ಸಂದರ್ಭದಲ್ಲಿ ಕರ್ನಾಟಕ ಪೌರ ರಕ್ಷಣಾ ಸಿಬ್ಬಂದಿಗಳು ಉತ್ತಮ ಸೇವೆಯನ್ನು ನೀಡಿದ್ದು ದುರಂತಗಳ ಪ್ರಮಾಣವನ್ನು ತಗ್ಗಿಸಿದ್ದಾರೆ’ ಎಂದರು.
ಇದೇ ಸಂದರ್ಭದಲ್ಲಿ ಅಗ್ನಿ ಶಾಮಕ, ಪೌರ ರಕ್ಷಣೆ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಗಳು ಬೆಂಕಿ ಅವಘಡ, ಬಾಂಬ್ ಸ್ಫೋಟ ಸಂದರ್ಭಗಳ ನಿರ್ವಹಣೆ ಬಗ್ಗೆ ಅಣುಕು ಪ್ರದರ್ಶನವನ್ನು ಪ್ರಸ್ತುತ ಪಡಿಸಿದರು.