`ಕೂಲಿಯಾಳು ಸಿಗುತ್ತಿಲ್ಲ, ಸಿಕ್ಕರೂ ಅವರು ಕೇಳಿದಷ್ಟು ಹಣ ಹೊಂದಿಸುವುದು ಸಾಧ್ಯವಿಲ್ಲ, ಹಾಗೂ ಹೀಗೂ ಹೊಂದಿಸಿದರೂ ಕಾರ್ಮಿಕರು ಹೇಳಿದ ಸಮಯಕ್ಕೆ ಬರುತ್ತಾರೆ ಎನ್ನುವ ಗ್ಯಾರಂಟಿಯೂ ಇಲ್ಲ.
ಹಳ್ಳಿಯಲ್ಲಿನ ಆರು ಎಕರೆ ಜಮೀನು ಬಿಟ್ಟು ಪಟ್ಟಣ ಸೇರುವ ಮನಸ್ಸೂ ಇಲ್ಲ. ಏನು ಮಾಡುವುದಪ್ಪ...~ ಎಂದು ವರ್ಷದ ಹಿಂದಷ್ಟೇ ತಲೆ ಮೇಲೆ ಕೈಹೊತ್ತು ಕುಳಿತಿದ್ದ ರೈತನೊಬ್ಬ ಈಗ ಯಾರ ನೆರವೂ ಇಲ್ಲದೇ ಬೆಳೆ ಬೆಳೆಯುತ್ತಿದ್ದಾರೆ. ಕೇವಲ ತೆಂಗು ಬೆಳೆಯುತ್ತಿದ್ದ ಇವರೀಗ ಅದರ ಜೊತೆ ಕೊತ್ತಂಬರಿ, ಟೊಮೆಟೊ ಸೇರಿದಂತೆ ಇತರ ತರಕಾರಿಗಳನ್ನೂ ಬೆಳೆದು ಸಾಧನೆ ಮಾಡಿದ್ದಾರೆ!
ಒಂದೇ ವರ್ಷದಲ್ಲಿ ಈ ರೀತಿ `ಚಮತ್ಕಾರ~ ಮಾಡಿರುವುದು ತುಮಕೂರು ಜಿಲ್ಲೆಯ ದೊಡ್ಡನಾರು ಹೊಂಗಲದ ರೈತ ಪದ್ಮನಾಭ ಆಚಾರ್. ಕೂಲಿಗಳ ಸಮಸ್ಯೆಯಿಂದ ಉಳುಮೆ ಮಾಡಲಾಗದೇ ಚಿಂತೆಗೀಡಾಗಿದ್ದ ಇವರ ನೆರವಿಗೆ ಬಂದದ್ದು ಕೃಷಿ ಯಂತ್ರ, ಓಲಿಯೋಮ್ಯಾಕ್ ರೋಟರಿ ಟಿಲ್ಲರ್.
ತುಮಕೂರಿನ ಅಗ್ರಿಮಾರ್ಟ್ ಕೃಷಿ ಯಂತ್ರೋಪಕರಣ ಮಳಿಗೆಯಿಂದ ಕೃಷಿ ಯಂತ್ರ ಖರೀದಿ ಮಾಡಿರುವ ಇವರು ಈಗ ತಮಗೆ ಬೇಕಾದ ಬೆಳೆಗಳನ್ನು ಯಾರೊಬ್ಬರ ನೆರವಿಲ್ಲದೆಯೇ ಬೆಳೆಯುತ್ತಿದ್ದಾರೆ, ಆರ್ಥಿಕವಾಗಿಯೂ ಸದೃಢರಾಗಿದ್ದಾರೆ.
ವೆಚ್ಚಕ್ಕೆ ಹೆದರಿದ್ದೆ: `ಕೃಷಿ ಯಂತ್ರದ ಬಗ್ಗೆ ಕೇಳ್ದ್ದಿದೆ. ಅದು ಬಹಳ ದುಬಾರಿ ಇರಬಹುದು ಎಂದುಕೊಂಡು ಅದನ್ನು ಖರೀದಿ ಮಾಡುವ ಸಾಹಸಕ್ಕೆ ಕೈಹಾಕಿರಲಿಲ್ಲ. ನಂತರ ಈ ಬಗ್ಗೆ ವಿಚಾರಿಸಿದೆ.
ಭೂಮಿ ಅಗೆಯಲು ಅಗತ್ಯ ಇರುವ ಓಲಿಯೋಮ್ಯಾಕ್ ರೋಟರಿ ಟಿಲ್ಲರ್ ಕೊಳ್ಳಲು ಸರ್ಕಾರ ಸಹಾಯಧನ (ಸಬ್ಸಿಡಿ) ನೀಡುತ್ತಿದೆ ಎನ್ನುವ ವಿಷಯ ತಿಳಿಯಿತು. ಆಗ ನಿರಾಳನಾದೆ. 64 ಸಾವಿರದ ಯಂತ್ರ ಈಗ ಸರ್ಕಾರದ ನೆರವಿನಿಂದ ಕೇವಲ 38 ಸಾವಿರಕ್ಕೆ ನನ್ನ ಕೈಸೇರಿದೆ~ ಎಂದು ಆಚಾರ್ ಹೆಮ್ಮೆಯಿಂದ ನುಡಿಯುತ್ತಾರೆ.
`ಇಲ್ಲಿಯವರೆಗೆ ಗುದ್ದಲಿ, ಪಿಕಾಸಿಯಲ್ಲಿ ಕೆಲಸ ಮಾಡುತ್ತಿದ್ದೆ. ಈ ಯಂತ್ರದ ಬಗ್ಗೆ ಕೇಳಿ ಮೊದಮೊದಲು ಅಂಜಿಕೆಯೇ ಆಯ್ತು. ಸಾವಿರಾರು ರೂಪಾಯಿ ತೆತ್ತು ಯಂತ್ರ ಕೊಂಡು ಅದರ ಬಳಕೆ ಮಾಡಲು ಬಾರದಿದ್ದರೆ ಏನು ಮಾಡುವುದು ಎಂಬ ಅಳುಕು ಕೂಡ ಎದುರಾಯಿತು.
ಆದರೆ ಅಗ್ರಿಮಾರ್ಟ್ ಕೃಷಿ ಯಂತ್ರೋಪಕರಣ ಮಳಿಗೆಯ ನುರಿತ ತರಬೇತುದಾರರು ತೋಟಕ್ಕೇ ಬಂದು ಯಂತ್ರ ಚಲಿಸುವ ಮತ್ತು ಬಿಡಿಭಾಗಗಳನ್ನು ಜೋಡಿಸುವ ಮತ್ತು ಹೇಗೆ ಬಳಸಬೇಕು ಎಂಬುದನ್ನು ಕಲಿಸಿಕೊಟ್ಟರು. ದಿನ ಪೂರ್ತಿ ಈ ತರಬೇತುದಾರರು ನಮ್ಮ ತೋಟದಲ್ಲಿಯೇ ಇದ್ದರು.
ಇದರಿಂದ ಈಗ ನಾನೊಬ್ಬನೇ ಈ ಆರು ಏಕರೆ ಜಮೀನಿನಲ್ಲಿ ಉಳುಮೆ ಮಾಡಿದ್ದೇನೆ~ ಎನ್ನುವ ಅವರು, ತೆಂಗಿನ ತೋಟದಲ್ಲಿ ತರಕಾರಿ ಬೆಳೆಗಳನ್ನು ಬೆಳೆಯುವುದೆಂದರೆ ಸುಲಭವೇ ಮತ್ತೆ ಎಂದು ಬೀಗುತ್ತಾರೆ.
`ಈ ಟಿಲ್ಲರ್ ಮಿಶ್ರ ಬೆಳೆಗೆ ಅತ್ಯಂತ ಪ್ರಯೋಜನಕಾರಿ. ಬೆಳೆಗಳ ಸಾಲುಗಳ ಮಧ್ಯೆ ಸರಾಗವಾಗಿ ಸಾಗುವ ಇದರ ಬ್ಲೇಡುಗಳು ಹದವಾಗಿ ಉಳುಮೆ ಮಾಡುತ್ತದೆ. ಉಳುಮೆ ಮಾಡಿದ ಜಾಗದಲ್ಲಿ ಬೇರೆ ಬೆಳೆಗಳ ಮಧ್ಯೆ ಇನ್ನೊಂದು ಬೆಳೆ ಹಾಕಲು ಸಾಧ್ಯವಾಗುವುದು ಕೂಡ ಈ ಯಂತ್ರದಿಂದ ಸಾಧ್ಯ. ಇತರ ಯಂತ್ರಗಳಂತೆ ಕರ್ಕಶ ಶಬ್ದ ಕೂಡ ಬರುವುದಿಲ್ಲ. ಅಷ್ಟೇ ಅಲ್ಲದೇ, ಇದು ಪರಿಸರಸ್ನೇಹಿಯೂ ಹೌದು~ ಎನ್ನುವುದು ಆಚಾರ್ ಅವರ ವರ್ಣನೆ.
ಇದರಿಂದ ತಮಗೆ ಆರ್ಥಿಕವಾಗಿಯೂ ಸಾಕಷ್ಟು ಲಾಭವಾಗಿದೆ ಎನ್ನುತ್ತಾರೆ ಆಚಾರ್. ಮೊದಲಾಗಿದ್ದರೆ 6 ಏಕರೆ ಭೂಮಿ ಊಳುಮೆ ಮಾಡಲು ಕೂಲಿಗಳಿಗೆ 12 ರಿಂದ 15 ಸಾವಿರ ಬೇಕಾಗುತ್ತಿತ್ತು. ಈಗ ಓಲಿಯೋಮ್ಯಾಕ್ ರೋಟರಿ ಟಿಲ್ಲರ್ ಬಳಸಲು ಪ್ರಾರಂಭಿಸಿದ ಮೇಲೆ ಸುಮಾರು 5 ಸಾವಿರ ರೂಪಾಯಿಗಳಿಗೆ ಇಷ್ಟೆಲ್ಲ ಬೆಳೆ ಬೆಳೆಯಲು ಸಾಧ್ಯವಾಗುತ್ತಿದೆ. ಒಂದು ಲೀಟರ್ ಪೆಟ್ರೋಲ್ನಿಂದ ಸರಾಸರಿ 2-3 ತಾಸು ಉಳುಮೆ ಮಾಡಬಹುದು ಎನ್ನುತ್ತಾರೆ ಅವರು. ಹೆಚ್ಚಿನ ಮಾಹಿತಿಗೆ: 98444-72827.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.