ಬಳ್ಳಾರಿ: ತಾಲ್ಲೂಕಿನಲ್ಲಿ ದುರಸ್ತಿಯ ಹಂತದಲ್ಲಿರುವ ಬಾವಿಗಳನ್ನು ಹಾಗೂ ತೆರೆದ ಕೊಳವೆ ಬಾವಿಗಳನ್ನು ತ್ವರಿತವಾಗಿ ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಬಳ್ಳಾರಿ ತಾಲ್ಲೂಕು ಪಂಚಾಯತಿ ಅಧ್ಯಕ್ಷ ವಿ.ಗಾದಿಲಿಂಗಪ್ಪ ಸೂಚಿಸಿದರು.
ತಾ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಬೇಸಿಗೆ ವೇಳೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಎದುರಾಗದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಎಲ್ಸಿ ಕಾಲುವೆ ಮೂಲಕ ನೀರು ಹರಿಸುವುದನ್ನು ನಿಲ್ಲಿಸುವುದರೊಳಗೆ ಸುತ್ತಮುತ್ತಲ ಗ್ರಾಮಗಳ ಕೆರೆಗಳನ್ನು ತುಂಬಿಸಬೇಕು. ಕುಡಿತಿನಿ ಹಾಗೂ ಮಿಂಚೇರಿ ಗ್ರಾಮಗಳ ಕೆರೆಗಳನ್ನು ಶೀಘ್ರ ದುರಸ್ತಿ ಮಾಡಬೇಕು ಎಂದು ಸೂಚಿಸಿದರು.
ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದ ತಾ.ಪಂ. ಇಓ ರಾಘವರೆಡ್ಡಿ, ಬಸವ ವಸತಿ ಯೋಜನೆ ಅಡಿ ಮಂಜೂರಾದ ಮನೆಗಳ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪ್ರಾರಂಭಿಸಿ ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಬೇಕು ಎಂದರು.
ಇದುವರೆಗೆ ನಿರ್ಮಾಣ ಆರಂಭವಾಗದ ಮನೆಗಳನ್ನು ಶಾಶ್ವತವಾಗಿ ರದ್ದುಗೊಳಿಸಲಾಗುವುದು ಎಂದು ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮ ಪಂಚಾಯತಿಗಳ ಕರ ವಸೂಲಾತಿಯ ಪ್ರಗತಿ ಕುಂಠಿತವಾಗಿದ್ದು, ಬಿಲ್ ಕಲೆಕ್ಟರ್ಗಳಿಗೆ ಗುರಿ ನಿಗದಿಪಡಿಸಿ ವಸೂಲಿ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು. ತುಂಗಭದ್ರಾ ಎಚ್ಎಲ್ಸಿ ಕಾಲುವೆಯಲ್ಲಿ ನೀರು ಹರಿಯುವುದು ಸ್ಥಗಿತಗೊಂಡ ಮೇಲೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಕಾಲುವೆಗಲ ಅವುಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಡಿತವನ್ನು ಮಿತಗೊಳಿಸಬೇಕು ಎಂದು ಅವರು ಸೂಚಿಸಿದರು.
ಉಪಾಧ್ಯಕ್ಷೆ ಮರೆಮ್ಮ, ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.