ಹೈದರಾಬಾದ್ (ಐಎಎನ್ಎಸ್, ಪಿಟಿಐ): ತಮ್ಮ ವಿರುದ್ಧ ಮೊಕದ್ದಮೆ ದಾಖಲಿಸಲು ಪೊಲೀಸರಿಗೆ ನ್ಯಾಯಾಲಯ ನಿರ್ದೇಶನ ನೀಡಿದ್ದರೂ, ಟಿಆರ್ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಭಾನುವಾರ ಇಲ್ಲಿ ಮತ್ತೆ ವಿವಾದಾತ್ಮಕ ಹೇಳಿಕೆಯನ್ನು ಪುನರುಚ್ಚರಿಸಿದರು.
`ಸಂಸತ್ನಲ್ಲಿ ಕೆಲಸ ಮಾಡುವ ಜವಾನ ಅರ್ಥಮಾಡಿಕೊಳ್ಳಬಲ್ಲ ತೆಲಂಗಾಣ ವಿಷಯವನ್ನು ಪ್ರಧಾನಿ ಅರ್ಥಮಾಡಿಕೊಳ್ಳಲಿಲ್ಲ' ಎಂದು ರಾವ್ ಇತ್ತೀಚೆಗೆ ಮನಮೋಹನ್ ಸಿಂಗ್ ಅವರನ್ನು ಟೀಕಿಸಿದ್ದರು.
ಈ ಬಗ್ಗೆ `ಮೊಕದ್ದಮೆ ದಾಖಲಿಸಿದರೂ ಅಥವಾ ಜೈಲಿಗೆ ಕಳುಹಿಸಿದರೂ ಹೇಳಿಕೆ ಹಿಂಪಡೆಯುವುದಿಲ್ಲ' ಎಂದು ಅವರು ಹೇಳಿದರು.
ಕಾಂಗ್ರೆಸ್ ಸಂಸದರಾದ ಜಿ. ವಿವೇಕ್, ಎಂ. ಜಗನ್ನಾಥ್, ಹಿರಿಯ ನಾಯಕ ಕೆ. ಕೇಶವರಾವ್, ಕೆಲವು ಮಾಜಿ ಸಚಿವರು ಸೇರಿದಂತೆ ಟಿಡಿಪಿ ಮತ್ತಿತರ ಪಕ್ಷಗಳ ಹಲವು ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.