ಹುಬ್ಬಳ್ಳಿ: ದವಡೆಯಲ್ಲಿನ ತೊಂದರೆಯಿಂದಾಗಿ ಬಾಯಿ ತೆರೆಯಲಾಗದೇ ಕಳೆದ 12 ವರ್ಷದಿಂದ ನೋವಿನಿಂದ ಬಳಲುತ್ತಿದ್ದ ಬಾಲಕಿಗೆ ಈಗ ಮರುಜೀವ ಬಂದಂತಾಗಿದೆ. ಬೆಂಗಳೂರಿನ ನಾರಾಯಣ ಹೃದಯಾಲಯ ಹಾಗೂ ಮಜುಮ್ದಾರ್ ಶಾ ಕ್ಯಾನ್ಸರ್ ಸೆಂಟರ್ವೈದ್ಯರು ನಡೆಸಿದ ಯಶಸ್ವಿ ಶಸ್ತ್ರಚಿಕಿತ್ಸೆಯಿಂದಾಗಿ ಆಕೆ ಹೊಸ ರೂಪ ಪಡೆದಿದ್ದಾಳೆ.
ನಾರಾಯಣ ಹೃದಯಾಲಯದ ವೈದ್ಯ ಡಾ. ರೋಲ್ಸನ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. ಕೊಪ್ಪಳ ಜಿಲ್ಲೆಯ ಮುರುಡಪ್ಪ ಎಂಬುವರ ಪುತ್ರಿ ರಾಜೇಶ್ವರಿ ಕಳೆದ 12 ವರ್ಷಗಳಿಂದ ದವಡೆ ತೊಂದರೆ ಎದುರಿಸುತ್ತಿದ್ದಳು. ಆಕೆ 2 ವರ್ಷದ ಮಗುವಾಗಿದ್ದಾಗ ಕಿವಿಯಲ್ಲಿನ ಸೋಂಕಿನಿಂದಾಗಿ ಈ ಸಮಸ್ಯೆ ಉಂಟಾಗಿ, ಇದೇ ಶಾಪವಾಗಿ ಪರಿಣಮಿಸಿತ್ತು. ಬಾಯಿ ತೆರೆಯಲಾಗದ ಕಾರಣ ಕೇವಲ ದ್ರವ ರೂಪದ ಆಹಾರವನ್ನಷ್ಟೇ ಸೇವಿಸುವಂತಾಗಿದೆ. ಆ ಹುಡುಗಿಗೆ ಕಳೆದ ಕೆಲವು ದಿನಗಳ ಹಿಂದೆ ಆಸ್ಪತ್ರೆ ವತಿಯಿಂದ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದ್ದು, ಈಗ ಆಕೆ ಆಹಾರವನ್ನು ಸೇವಿಸಬಹುದಾಗಿದೆ. ಮಾತ್ರವಲ್ಲ, ಆಕೆಯ ಮುಖಚರ್ಯೆಯೇ ಬದಲಾಗಿದೆ. ಸರ್ಕಾರದ ಆರೋಗ್ಯ ಶ್ರೀ ಯೋಜನೆಯ ಅಡಿ ಆಕೆಗೆ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.
ನಾರಾಯಣ ಹೃದಯಾಲಯ ಆಸ್ಪತ್ರೆ ಸಮೂಹವು ಈ ರೀತಿಯ ಅಪರೂಪದ ಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸುತ್ತ ಬಂದಿದೆ. ಈ ರೀತಿಯ ತೊಂದರೆಗಳಿಗೆ ದೇಶದ ವಿವಿಧ ಆಸ್ಪತ್ರೆಗಳಲ್ಲಿ ವಿವಿಧ ಹಂತಗಳಲ್ಲಿ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತದೆ. ಆದರೆ ನಾರಾಯಣ ಹೃದಯಾಲಯವು ಒಂದೇ ಹಂತದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡುವಂತಹ ಸೌಲಭ್ಯ ಹಾಗೂ ವೈದ್ಯರನ್ನು ಹೊಂದಿದೆ ಎಂದು ಅವರು ಹೇಳಿದರು.
ವಂಶವಾಹಿಯಲ್ಲಿನ ಬದಲಾವಣೆ ಮೊದಲಾದ ತೊಂದರೆಗಳಿಂದಾಗಿ ಈ ರೀತಿಯ ಸಿಂಡ್ರೋಮ್ ಗಳು ಉಂಟಾಗುತ್ತವೆ. ಉತ್ತರ ಕರ್ನಾಟಕದ ಜನರಲ್ಲಿ ಸಹ ಈ ತೊಂದರೆಗಳು ಹೆಚ್ಚು. ಆದರೆ ಇಲ್ಲಿನ ಜನರಿಗೆ ಈ ಕುರಿತು ಅರಿವು ಕಡಿಮೆ. ಹೀಗಾಗಿ ಅನೇಕ ಶಿಬಿರಗಳ ಮೂಲಕ ಅವರಿಗೆ ತಿಳಿವಳಿಕೆ ಮೂಡಿಸಲು ಯತ್ನಿಸುತ್ತಿದ್ದೇವೆ. ಸರ್ಕಾರದಿಂದ ಅನೇಕ ಆರೋಗ್ಯ ಸೌಲಭ್ಯಗಳು ಲಭ್ಯವಿದ್ದು, ಅರ್ಹರಿಗೆ ಅವುಗಳ ಲಾಭ ಪಡೆಯಲು ಆಸ್ಪತ್ರೆ ಪ್ರೇರೆಪಿಸುತ್ತಿದೆ. ಜನರೂ ಈ ಕುರಿತು ಅರಿವು ಮೂಡಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.