ಮೈಸೂರು: ದಸರಾ ಮಹೋತ್ಸವದ ಎಲ್ಲ ಸಿದ್ಧತೆಗಳು ಭರದಿಂದ ನಡೆದಿದ್ದು, ದಸರಾ ಭಜನಾ ಕಾರ್ಯಕ್ರಮ, ಸ್ವಚ್ಫತಾ ಅಭಿಯಾನ ಮುಂತಾದ ಕಾರ್ಯಕ್ರಮಗಳು ಈಗಾಗಲೇ ಪ್ರಾರಂಭವಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ಪಿ.ಎಸ್.ವಸ್ತ್ರದ್ ಹೇಳಿದರು.
ಭಾನುವಾರ ದಸರಾ ಕುಸ್ತಿ ಅಖಾಡದ ಸಿದ್ಧತಾ ಕಾರ್ಯವನ್ನು ಪರಿಶೀಲಿಸಿ ಮಾತನಾಡಿದ ಅವರು ಅ.15 ರಂದು ಬೆಳಿಗ್ಗೆ 9-30 ಗಂಟೆಗೆ ವೈಮಾನಿಕ ಹಾರಾಟ ಪ್ರಾರಂಭವಾಗಲಿದ್ದು, ಆಸಕ್ತರು 2500 ರೂಪಾಯಿ ಟಿಕೆಟ್ ಖರೀದಿಸಿ ಆಕಾಶದಿಂದ ಮೈಸೂರು ನಗರದ ಸೌಂದ ರ್ಯವನ್ನು ಸವಿಯಬಹುದು. ನಗರ ದಾದ್ಯಂತ ದೀಪಾಲಂಕಾರ ಮಾಡುವ ಕಾರ್ಯವೂ ಸಹ ಚೆನ್ನಾಗಿ ನಡೆದಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಗ್ರಾಮ ಪಂಚಾುತಿ ಚುನಾವಣೆ, ಮತದಾರರ ನೋಂದಣಿ, ಬರ ಮುಂತಾದ ಬಿಡುವಿಲ್ಲದ ಕಾರ್ಯಗಳ ನಡುವೆಯೂ ಈ ಬಾರಿಯ ದಸರಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಎಲ್ಲ ಗಣ್ಯರಿಗೆ, ಆಹ್ವಾನಿತರಿಗೆ ಆಹ್ವಾನಪತ್ರ ನೀಡುವ, ಕಲಾವಿದರನ್ನು ಸಂಪರ್ಕಿಸಿ ಆಹ್ವಾನಿಸುವ ಕಾರ್ಯವೂ ಮುಗಿದಿದೆ. ನಗರದ ವಿವಿಧ ಕಡೆಗಳಲ್ಲಿ ರಸ್ತೆ ದುರಸ್ತಿ ಕಾಮಗಾರಿಯೂ ನಡೆದಿದೆ ಎಂದು ಹೇಳಿದರು.
ಕರ್ನಾಟಕ ವಸ್ತುಪ್ರದರ್ಶನದ ಅಧ್ಯಕ್ಷ ಬಿ.ಪಿ. ಮಂಜುನಾಥ್, ದಸರಾ ಕುಸ್ತಿ ಪಂದ್ಯಾವಳಿ ಉಪ ಸಮಿತಿ ಅಧ್ಯಕ್ಷ ಪೈಲ್ವಾನ್ ವಿ.ಗಿರಿಧರ್, ಮುಡಾ ಆಯುಕ್ತ ಡಾ.ಸಿ.ಜಿ.ಬೆಟಸೂರಮಠ ಹಾಜರಿದ್ದರು.
ಇದಕ್ಕೂ ಮುನ್ನ ಪಿ.ಎಸ್.ವಸ್ತ್ರದ್ ಅವರು ಕಾಡಾ ಕಚೇರಿ ಆವರಣದಲ್ಲಿ ಆಯೋಜಿಸಲಾಗುವ ಆಹಾರ ಮೇಳ, ಚಾಮುಂಡಿ ವಿಹಾರ ಕ್ರೀಡಾಂಗಣ ದಲ್ಲಿ ಜರುಗುವ ದಸರಾ ಕ್ರೀಡಾ ಚಟುವಟಿಕೆಗಳ ಸಿದ್ಧತೆಯನ್ನು ಪರಿಶೀಲಿಸಿದರು.