ನವದೆಹಲಿ (ಪಿಟಿಐ): ನ್ಯಾಯಮೂರ್ತಿಗಳಾದ (ನಿವೃತ್ತ) ಪಿ.ಡಿ. ದಿನಕರನ್ ಮತ್ತು ಸೌಮಿತ್ರ ಸೆನ್ ಅವರು ತಮ್ಮ ವಿರುದ್ಧದ ದೋಷಾರೋಪಣೆ ಪ್ರಕ್ರಿಯೆಗೆ ಮೊದಲೇ ರಾಜೀನಾಮೆ ನೀಡಿದ್ದರು ಕೂಡ ನಿವೃತ್ತಿ ನಂತರದ ಲಾಭಗಳನ್ನು ಪಡೆಯಲಿದ್ದಾರೆ.
ನ್ಯಾಯಾಧೀಶರು ಇಂತಹ ಪರಿಸ್ಥಿತಿಗಳಲ್ಲಿ ವೇತನ ಮತ್ತು ಭತ್ಯೆಯಂತಹ ಹಕ್ಕುಗಳನ್ನು ಮತ್ತು ಪಿಂಚಣಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಸಂವಿಧಾನದ 221ನೇ ಪರಿಚ್ಛೇದ ಇದಕ್ಕೆ ಅವಕಾಶ ಕಲ್ಪಿಸುತ್ತದೆ ಎಂದು ಆರ್ಟಿಯ ಅರ್ಜಿಗೆ ಉತ್ತರಿಸಿರುವ ನ್ಯಾಯಾಂಗ ಇಲಾಖೆ ಹೇಳಿದೆ.
`ನ್ಯಾಯಾಧೀಶರು ನಿಂದನೆ ವಿಚಾರಣೆಗಳನ್ನು ತಪ್ಪಿಸಿಕೊಳ್ಳಲು ಅವಧಿಗೆ ಮೊದಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಪ್ರಕರಣಗಳಲ್ಲಿ ಕೂಡ ಅವರು ನಿವೃತ್ತಿ ನಂತರದ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಇದನ್ನು ತಡೆಯಲು ಸಾಂವಿಧಾನಾತ್ಮಕ ಅಥವಾ ಶಾಸನಬದ್ಧ ಅವಕಾಶಗಳು ಇಲ್ಲ~ ಎಂದು ಇಲಾಖೆ ತಿಳಿಸಿದೆ.
ಈ ಕುರಿತಂತೆ ಕಾರ್ಯಕರ್ತ ಸುಭಾಷ್ ಅಗರ್ವಾಲ್ ಎಂಬುವರು ಇಲಾಖೆಗೆ ಅರ್ಜಿ ಸಲ್ಲಿಸಿ ಮಾಹಿತಿ ತಿಳಿಯಬಯಸಿದ್ದರು.
ಕೋಲ್ಕತ್ತ ಹೈಕೋರ್ಟ್ನ ನ್ಯಾಯಮೂರ್ತಿ ಸೌಮಿತ್ರ ಸೆನ್ ಅವರು ಲೋಕಸಭೆಯಲ್ಲಿ ತಮ್ಮ ವಿರುದ್ಧ ದೋಷಾರೋಪಣ ನಿರ್ಣಯ ವಿಷಯ ಚರ್ಚೆಗೆ ಬರುವ ಐದು ದಿನಗಳ ಮೊದಲೇ ಕಳೆದ ಸೆ. 1ರಂದು ರಾಜೀನಾಮೆ ನೀಡಿದ್ದರು.
ಭೂಗಹಗರಣ ಕುರಿತು ಮೂವರು ಸದಸ್ಯರ ತನಿಖಾ ಸಮಿತಿಯು ವಿಚಾರಣೆ ಆರಂಭಿಸುವ ಹಿಂದಿನ ದಿನ ಸಿಕ್ಕಿಂ ಹೈಕೋರ್ಟ್ನ ಆಗಿನ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಕಳೆದ ಜುಲೈ 29ರಂದು ರಾಜೀನಾಮೆ ಸಲ್ಲಿಸಿದ್ದರು.