ಬಳ್ಳಾರಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ಎಂ.ದಿವಾಕರ ಬಾಬು ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಹಮಾಲರ ಸಂಘದ ಸದಸ್ಯರು ಹಾಗೂ ಬೆಂಬಲಿಗರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಪಕ್ಷದ ಬಲವರ್ಧನೆಗೆ ದಿವಾಕರಬಾಬು ಶ್ರಮಿಸಿದ್ದು, ಅವರಿಗೇ ನಗರ ಕ್ಷೇತ್ರದ ಟಿಕೆಟ್ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅನಿಲ್ಲಾಡ್ ಅವರು ರಾಜ್ಯಸಭಾ ಸದಸ್ಯರಾಗಿದ್ದು, ಅವರ ಸಂಸದ್ ಸದಸ್ಯತ್ವದ ಅವಧಿ ಇನ್ನೂ ಒಂದೂವರೆ ವರ್ಷ ಇದೆ. ಇದೀಗ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಬದಲಿಗೆ, ದಿವಾಕರ್ಬಾಬು ಅವರಿಗೆ ಅವಕಾಶ ನೀಡಬೇಕು ಎಂದು ಅವರು ಕೋರಿದರು.
ನಗರಸಭೆಯ ಮಾಜಿ ಸದಸ್ಯರಾದ ರಾಘವೇಂದ್ರ, ವೀರೇಶ, ರಘು, ವಿಜಯ್ಕುಮಾರ್, ರವಿ ಸೇರಿದಂತೆ ನೂರಾರು ಬೆಂಬಲಿಗರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
`ಎಲ್.ಮಾರೆಣ್ಣಗೆ ಬಿ.ಫಾರಂ ನೀಡಿ'
ಬಳ್ಳಾರಿ: ಮೇ 5ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಹರಿಬೊಮ್ಮನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಪಡೆದಿರುವ ಬಲ್ಳಾರಿಯ ಎಲ್. ಮಾರೆಣ್ಣ ಅವರಿಗೆ ಬಿ.ಫಾರಂ ನೀಡಬೇಕು ಎಂದು ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಜಿಲ್ಲಾ ಘಟಕ ತಿಳಿಸಿದೆ.
ಪಕ್ಷದ ಮುಖಂಡರು ಈ ಕೂಡಲೇ ಎಲ್. ಮಾರೆಣ್ಣ ಅವರಿಗೆ ಬಿ.ಫಾರಂ ನೀಡುವ ಮೂಲಕ ಅತ್ಯಂತ ಹಿಂದುಳಿದಿರುವ ದಲಿತ ಸಮುದಾಯಕ್ಕೆ ಗೌರವ ನೀಡಬೇಕು ಎಂದು ಸಂಘದ ಈಶ್ವರ, ಸೋಮಶೇಖರ್, ಅಜಾದ್, ಮಲ್ಲಿಕಾರ್ಜುನ, ಎಸ್. ಕಲ್ಲಪ್ಪ, ವೀರಪ್ಪ, ಕೆ. ವೀರಬಸಪ್ಪ, ಶೇಖಣ್ಣ ಮತ್ತಿತರರು ಆಗ್ರಹಿಸಿದ್ದಾರೆ.
ಬಿ. ಫಾರಂ ನೀಡದಿದ್ದಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಿಲಿಸದೆ ಅಸಹಕಾರ ನೀಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.