ರಾಳೆಗಣಸಿದ್ದಿ (ಪಿಟಿಐ): ಲೋಕಪಾಲ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಮತ್ತು ಆಮ್ ಆದ್ಮಿ ಪಕ್ಷದ ನಡುವಿನ ತಿಕ್ಕಾಟ ತೀವ್ರಗೊಂಡಿದೆ. ಮಸೂದೆ ದುರ್ಬಲವಾಗಿದೆ ಎಂಬ ಆಮ್ ಆದ್ಮಿ ಪಕ್ಷದ ಆರೋಪವನ್ನು ಹಜಾರೆ ತಳ್ಳಿ ಹಾಕಿದ್ದಾರೆ.
ತಿದ್ದುಪಡಿಯಾದ ಮಸೂದೆಯಲ್ಲಿನ ಅಂಶಗಳ ಬಗ್ಗೆ ಹಜಾರೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಮಸೂದೆಯಿಂದ ಸಮಾಜ ಮತ್ತು ಜನರಿಗೆ ಒಳ್ಳೆಯದಾಗಲಿದೆ ಎಂದಿರುವ ಅವರು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮಸೂದೆಯಲ್ಲಿ ನ್ಯೂನತೆಗಳಿವೆ ಎಂದು ಆಮ್ ಆದ್ಮಿ ಪಕ್ಷ ಭಾವಿಸಿದರೆ, ಅದನ್ನು ಸರಿಪಡಿಸಲು ಅವರು ಹೊಸದಾಗಿ ಚಳವಳಿ ಮತ್ತು ನಿರಶನ ಆರಂಭಿಸಲಿ ಎಂದು ಹಜಾರೆ ಹೇಳಿದ್ದಾರೆ. ಮಸೂದೆ ಎರಡೂ ಸದನಗಳಲ್ಲಿ ಅಂಗೀಕಾರವಾಗುವ ತನಕ ಉಪವಾಸ ನಿಲ್ಲಿಸುವುದಿಲ್ಲ ಎಂದೂ ಹಜಾರೆ ತಿಳಿಸಿದ್ದಾರೆ. ಜನ ಲೋಕಪಾಲ ಮಸೂದೆ ಅಂಗೀಕಾರಕ್ಕೆ ಆಗ್ರಹಿಸಿ ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಆರನೇ ದಿನ ಪೂರೈಸಿದೆ.