ಭರಮಸಾಗರ: ಎರಡು ಎಕರೆ ಪ್ರದೇಶದಲ್ಲಿ ಬೆಳೆಸಿದ್ದ ಸುಮಾರು 1200 ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ನಿರ್ದಯವಾಗಿ ಕಡಿದುಹಾಕಿದ ಘಟನೆ ಹೋಬಳಿಯ ಕಡ್ಲೆಗುದ್ದು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಗ್ರಾಮದ ಆಂಜನೇಯ ದೇವಸ್ಥಾನದ ಪೂಜಾರಿ ವೈಷ್ಣವ ಜನಾಂಗದ ಆರ್. ಹನುಮಂತಯ್ಯ ತಮ್ಮ 4 ಎಕರೆ 17ಗುಂಟೆ ಪ್ರದೇಶದಲ್ಲಿ ಅಡಿಕೆ ಗಿಡಗಳನ್ನು ಬೆಳೆಸಿದ್ದಾರೆ. ಅದರಲ್ಲಿ ಸಣ್ಣಗಿಡಗಳನ್ನು ಬಿಟ್ಟು ಎರಡು ಎಕರೆ ಪ್ರದೇಶದಲ್ಲಿದ್ದ ನಾಲ್ಕು ವರ್ಷದ 1200 ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಮಂಗಳವಾರ ರಾತ್ರಿ ಕಡಿದು ಹಾಕಿದ್ದು ಸುಮಾರು ₨ 4 ಲಕ್ಷ ನಷ್ಟವಾಗಿದೆ.
ಇನ್ನೆರಡು ವರ್ಷ ಕಳೆದಿದ್ದರೆ ಅಡಿಕೆ ಫಸಲು ಆರಂಭವಾಗಲಿದ್ದು ಉತ್ತಮ ಆದಾಯದ ನಿರೀಕ್ಷೆ ಇರಿಸಿಕೊಂಡಿದ್ದ ಕುಟುಂಬ ಘಟನೆಯಿಂದ ನೊಂದಿದೆ.
ಹನುಮಂತಯ್ಯ ಭರಮಸಾಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.