ನವದೆಹಲಿ (ಪಿಟಿಐ/ಐಎಎನ್ಎಸ್): ನಾಳೆ ದೆಹಲಿ ವಿಧಾನಸಭೆ ಚುನಾವಣೆ ಬುಧವಾರ ನಡೆಯಲಿದ್ದು ಸೂಕ್ಷ್ಮ ಪ್ರದೇಶಗಳಲ್ಲಿ ಚುನಾವಣಾ ಆಯೋಗ ತೀವ್ರ ಕಟ್ಟೆಚ್ಚರ ವಹಿಸಿದೆ. ಕೊಳಚೆ ಪ್ರದೇಶ ಮತ್ತು ಅನಧಿಕೃತ ಕಾಲೊನಿಗಳಲ್ಲಿ ಹಣ, ಹೆಂಡದ ದುರುಪಯೋಗ ಮತ್ತು ತೋಳ್ಬಲದಿಂದ ಮತದಾರರನ್ನು ಹೆದರಿಸುವ ಸಾಧ್ಯತೆ ಇರುವ ಕಾರಣಕ್ಕಾಗಿ ಕೆಲವು ಪ್ರದೇಶಗಳಲ್ಲಿ ಆಯೋಗ ಹೆಚ್ಚಿನ ನಿಗಾ ವಹಿಸಿದೆ.
ಮತದಾರರಿಗೆ ಲಂಚದ ಆಮಿಷವೊಡ್ಡುವ ಪ್ರಕರಣ ಪತ್ತೆಯಾದರೆ ರಾಜ-ಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳಷ್ಟೇ ಅಲ್ಲ. ಲಂಚ ಪಡೆದ ವ್ಯಕ್ತಿಯ ಮೇಲೂ ಭಾರತೀಯ ದಂಡ ಸಂಹಿತೆ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ದೆಹಲಿ ಮುಖ್ಯ ಚುನಾವಣಾಧಿಕಾರಿ ವಿಜಯ ದೇವ್ ತಿಳಿಸಿದ್ದಾರೆ.
‘ಕಾಸಿಗಾಗಿ ಸುದ್ದಿ’: ದೆಹಲಿಯ ವಿಧಾನ-ಸಭಾ ಚುನಾವಣೆಗೆ ಸ್ಪರ್ಧಿಸಿರುವ ಐವರು ಅಭ್ಯರ್ಥಿಗಳಿಗೆ ಸಂಬಂಧಿಸಿದ ‘ಕಾಸಿಗಾಗಿ ಸುದ್ದಿ’ ಪ್ರಕರಣಗಳನ್ನು ಚುನಾವಣಾ ಆಯೋಗ ಪತ್ತೆ ಹಚ್ಚಿದೆ. ಆಯೋಗವು ಈ ವೆಚ್ಚವನ್ನು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಿದೆ.
ಕಣದಲ್ಲಿ 108 ಮುಸ್ಲಿಂ ಅಭ್ಯರ್ಥಿಗಳು: ಕಳೆದ 5 ವರ್ಷಗಳಿಂದ ಮುಸ್ಲಿಂ ಅಭ್ಯರ್ಥಿಗಳ ಸಂಖ್ಯೆ ದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಾಗುತ್ತಿದ್ದು, ಈ ಬಾರಿ ಒಟ್ಟು 108 ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಎಲ್ಲಾ ಪಕ್ಷಗಳು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. 2008ರಲ್ಲಿ 92 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.