ಬೆಂಗಳೂರು: ದೇವಸ್ಥಾನಗಳಲ್ಲಿ ಸಂಪತ್ತನ್ನು ಶೇಖರಿಸಿ ಇಡುವ ಪ್ರವೃತ್ತಿ ನಿಲ್ಲಬೇಕು. ಅಂಥ ಸಂಪತ್ತನ್ನು ಬಡವರು, ಹಿಂದುಳಿದ ಸಮುದಾಯದವರಿಗೆ ಕುಡಿಯುವ ನೀರು, ಶಿಕ್ಷಣ ಮತ್ತಿತರ ಸೌಕರ್ಯಗಳನ್ನು ಕಲ್ಪಿಸಲು ಉಪಯೋಗಿಸಬೇಕು ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ನುಡಿದರು.
ಬೆಂಗಳೂರು ನಾರ್ಥ್ ಎಜುಕೇಷನ್ ಸೊಸೈಟಿ, ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಗುರುವಾರ ಏರ್ಪಡಿಸಿದ್ದ, `ರತ್ನಾಕರವರ್ಣಿ ಪ್ರಸ್ತುತತೆ ಮತ್ತು ಇತಿವೃತ್ತ~ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡಿದರು.
`ಕೇರಳದ ಅನಂತಪದ್ಮನಾಭ ದೇಗುಲದ ಅಪಾರ ಸಂಪತ್ತನ್ನುಳ್ಳ ಮಾಳಿಗೆಗಳ ಬಾಗಿಲುಗಳನ್ನು ತೆರೆಯಲಾಗುತ್ತಿದೆ. ಅಲ್ಲಿರುವ `ಲಕ್ಷ್ಮೀ~ಯನ್ನು ಬಡವರಿಗೆ ಹಂಚಬೇಕು. ದುಡ್ಡಿದ್ದವರು ಹಣವನ್ನು ದೇವಸ್ಥಾನದಲ್ಲಿ ಸಂಗ್ರಹಿಸಿಡುವುದನ್ನು ನಿಲ್ಲಿಸಿ ಮಾನವ ಕಲ್ಯಾಣಕ್ಕೆ ವಿನಿಯೋಗಿಸಬೇಕು.
ಆಂಧ್ರದ ಗಡಿಯುದ್ದಕ್ಕೂ ಹಲವಾರು ಹಿಂದುಳಿದ ಸಮುದಾಯಗಳಿಗೆ ಮೂಲ ಸೌಕರ್ಯಗಳಿಲ್ಲ. ಅಂಥವರ ನೆರವಿಗೆ ಈ ಸಂಪತ್ತು ಬಳಕೆಯಾಗಬೇಕು~ ಎಂದರು. ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, `ಜವಹರಲಾಲ್ ನೆಹರು ಆರಂಭಿಸಿದ ಅಕಾಡೆಮಿಯು ಪ್ರಾಚೀನ, ಮಧ್ಯಯುಗೀನ ಹಾಗೂ ಸಮಕಾಲೀನ ಸಾಹಿತಿಗಳ ಕುರಿತಂತೆ ಹಲವು ಕಾರ್ಯಕ್ರಮಗಳನ್ನು ಇಲ್ಲಿವರೆಗೆ ಏರ್ಪಡಿಸಿದೆ~ ಎಂದರು.
ಸಾಹಿತಿಗಳಾದ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ, ಡಾ.ವಿಜಯಾ, ಡಾ.ಎ.ವಿ.ನಾವಡ, ಡಾ.ಎಂ.ರಾಮಚಂದ್ರ, ಡಾ.ಎಂ.ಬಿ.ಬಿರಾದಾರ, ಶುಭಚಂದ್ರ, ಗೌರಿ ಸುಂದರ್ ಅವರನ್ನು ರಾಜ್ಯಪಾಲರು ಸನ್ಮಾನಿಸಿದರು. ಹಿರಿಯ ಸಾಹಿತಿ ಡಾ.ಕಮಲಾ ಹಂಪನಾ, ಕರ್ನಾಟಕ ಸಂಸ್ಕೃತ ವಿ.ವಿ. ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಡಾ.ರಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್, ಬಿಎನ್ಇ ಸೊಸೈಟಿಯ ಮುಖ್ಯಸ್ಥ ಪ್ರೊ.ಕೆ.ಈ.ರಾಧಾಕೃಷ್ಣ ಭಾಗವಹಿಸಿದ್ದರು.