ಬೆಂಗಳೂರು: ಅಮೆರಿಕದಲ್ಲಿನ ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರನ್ನು ಅಮಾನವೀಯವಾಗಿ ನಡೆಸಿಕೊಂಡಿರುವ ಕ್ರಮವನ್ನು ಖಂಡಿಸಿ ‘ಚಿಲ್ಡ್ರನ್ ರೈಟ್ಸ್ ಇನಿಷಿಯೇಟಿವ್ ಫಾರ್ ಶೇರ್್ಡ ಪೇರೆಂಟಿಂಗ್’ (ಕ್ರಿಸ್ಪ್) ಸಂಘಟನೆ ಸದಸ್ಯರು ನಗರದ ಪುರಭವನದ ಬಳಿ ಭಾನುವಾರ ಪ್ರತಿಭಟನೆ ಮಾಡಿದರು.
ಅಮೆರಿಕದ ಅಧಿಕಾರಿಗಳು ದೇವಯಾನಿ ವಿರುದ್ಧ ಸುಳ್ಳು ದೂರು ದಾಖಲಿಸಿ ಬಂಧಿಸಿದ್ದಾರೆ. ಅಲ್ಲದೇ, ವಿಚಾರಣೆ ನೆಪದಲ್ಲಿ ಅವರನ್ನು ವಿವಸ್ತ್ರಗೊಳಿಸಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ದೂರಿದರು. ‘ರಾಜತಾಂತ್ರಿಕ ಅಧಿಕಾರಿಗಳನ್ನು ಗೌರವದಿಂದ ನಡೆಸಿಕೊಳ್ಳಬೇಕು. ಆದರೆ, ದೇವಯಾನಿ ರ ವಿಷಯದಲ್ಲಿ ಅಮೆರಿಕ ಅನಾಗರಿಕವಾಗಿ ವರ್ತಿಸಿದೆ. ಅವರನ್ನು ಅವಮಾನಿಸುವ ಮೂಲಕ ದೇಶದ ಗೌರವಕ್ಕೆ ಧಕ್ಕೆ ಉಂಟು ಮಾಡಿದೆ’ ಎಂದು ಸಂಘಟನೆಯ ಅಧ್ಯಕ್ಷ ಕುಮಾರ್ ಜಹಗೀರ್ದಾರ್ ಹೇಳಿದರು.
ಘಟನೆ ಸಂಬಂಧ ಅಮೆರಿಕ ಅಧ್ಯಕ್ಷರು ಕೂಡಲೇ ಕ್ಷಮೆ ಯಾಚಿಸಬೇಕು. ದೇವಯಾನಿ ವಿರುದ್ಧ ದಾಖಲಿಸಿರುವ ಪ್ರಕರಣ ಹಿಂಪಡೆಯಬೇಕು. ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮಗಳ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಫ್ರಾನ್ಸ್ ಕಾನ್ಸುಲ್ ಜನರಲ್ ಕಚೇರಿಯ ಮಾಜಿ ಅಧಿಕಾರಿ ಪಾಸ್ಕಲ್ ಮುಜುರಿಯರ್ ಅವರಿಗೆ ನ್ಯಾಯ ಒದಗಿಸಬೇಕು. ಅವರಿಗೆ ಮಕ್ಕಳನ್ನು ಭೇಟಿಯಾಗಲು ಅವಕಾಶ ಕಲ್ಪಿಸಿಕೊಡಬೇಕು. ಪಾಸ್ಕಲ್ ಪ್ರಕರಣದ ವಿಚಾರಣೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದು ಪ್ರತಿಭಟನಾನಿರತರು ಮನವಿ ಮಾಡಿದರು.
ಪಾಸ್ಕಲ್, ಅವರ ತಾಯಿ ಜಾಕಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.