ಮೂಡಿಗೆರೆ: ನಿರ್ಮಾಣ ಹಂತದಲ್ಲಿದ್ದ ದೇವಾಲಯದ ಮಹಾದ್ವಾರವನ್ನು ಗುರುವಾರ ರಾತ್ರಿ ದುಷ್ಕರ್ಮಿಗಳು ಹಾನಿಗೊಳಿಸಿದ್ದಾರೆ.
ಈ ಕೃತ್ಯವನ್ನು ಖಂಡಿಸಿ ಶುಕ್ರವಾರ ವಿವಿಧ ಸಂಘಟನೆಗಳು, ಪಕ್ಷಗಳು, ಸಾರ್ವಜನಿಕರು, ಗ್ರಾಮಸ್ಥರು ಪ್ರತಿಭಟನೆ, ರಸ್ತೆ ತಡೆ ನಡೆಸಿದರು.
ತಾಲ್ಲೂಕಿನ ಹೆಸ್ಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಗುಳದ ಕೆರೆಮನೆ ಶ್ರೀ ಏಳುಮುಖ ಚೌಡೇಶ್ವರಿ ದೇವಿ ದೇವಾಲಯಕ್ಕೆ ವಾರದ ಹಿಂದೆ, ಬಿಳಗುಳದ ಕೆ.ಎಂ.ರಸ್ತೆಯ ತಿರುವಿನಲ್ಲಿ ಮಹಾದ್ವಾರವನ್ನು ನಿರ್ಮಿಸಲು ದೇವಾಲಯ ಸಮಿತಿ ತೀರ್ಮಾನಿಸಿ, ಕಾಮಗಾರಿಯನ್ನು ಪ್ರಾರಂಭಿಸಿತ್ತು.
ಈ ವೇಳೆ ಪಕ್ಕದ ಪ್ರದೇಶದವರಾದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಜಿಲ್ಲಾ ಕಾರ್ಯದರ್ಶಿ ಬಿಳಗುಳ ಅಲ್ತಾಫ್ ಎಂಬುವವರು ಹೆಸ್ಗಲ್ ಗ್ರಾಮ ಪಂಚಾಯಿತಿಗೆ ದೂರವಾಣಿ ಕರೆ ಮಾಡಿ, ಅನುಮತಿ ಇಲ್ಲದೇ ದ್ವಾರವನ್ನು ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಿ, ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರ ಸಭೆ ನಡೆಸಿ, ಮಹಾದ್ವಾರ ನಿರ್ಮಾಣಕ್ಕೆ ನಿರ್ಣಯ ಕೈಗೊಂಡು, ಅನುಮತಿ ನೀಡಲಾಗಿತ್ತು.
ಅನುಮತಿ ಪಡೆದ ನಂತರ ಮೂರು ದಿನಗಳ ಹಿಂದೆ ರಸ್ತೆಯ ಎರಡೂ ಬದಿಯಲ್ಲಿ ಕಬ್ಬಿಣದ ಪೈಪುಗಳನ್ನು ಅಳವಡಿಸಿ, ಅದಕ್ಕೆ ಸುಮಾರು ಮೂರು ಅಡಿ ಎತ್ತರಕ್ಕೆ ಸಿಮೆಂಟಿನ ಕಟ್ಟಡವನ್ನು ಕಟ್ಟಲಾಗಿತ್ತು. ಗುರುವಾರ ರಾತ್ರಿ ದಾಳಿ ನಡೆಸಿರುವ ದುಷ್ಕರ್ಮಿಗಳು, ಸಿಮೆಂಟಿನ ಕಟ್ಟಡವನ್ನು ಧ್ವಂಸಗೊಳಿಸಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಸ್ಥರು, ದೇವಾಲಯ ಸಮಿತಿ ಸದಸ್ಯರು, ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ, ಧ್ವಂಸ ಪ್ರಕರಣದಲ್ಲಿ ದ್ವಾರ ನಿರ್ಮಾಣದ ವೇಳೆ ಆಕ್ಷೇಪಣೆ ವ್ಯಕ್ತ ಪಡಿಸಿದ್ದ ಅಲ್ತಾಫ್ ಅವರ ಕೈವಾಡವಿದ್ದು, ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಘಟನೆಗೆ ಸಂಬಂಧಿಸಿ ಮೂವರ ವಿರುದ್ಧ ದೂರು ದಾಖಲಾಗಿದೆ.