ವಿಟ್ಲ: `ಧರ್ಮವನ್ನು ಅರಿತು ಬಾಳಿದರೆ ಸಂಸಾರದಲ್ಲಿ ಅನ್ಯೋನ್ಯತೆ ಕಾಣಲು ಸಾಧ್ಯ~ ಎಂದು ಒಡಿಯೂರು ಗುರುದೇವಾನಂದ ಸ್ವಾಮೀಜಿ ಹೇಳಿದರು.
ಮಾಣಿಲ ಶ್ರೀಧಾಮದಲ್ಲಿ ಭಾನುವಾರ ನಡೆದ 505ನೇ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಅವರು ಆಶೀರ್ವಚನ ನೀಡಿದರು.
`ಮೂಢನಂಬಿಕೆಯಿಂದ ದುಶ್ಚಟ ಆರಂಭವಾಗುತ್ತದೆ. ಮದ್ಯಪಾನಿಗಳ ಸಂಖ್ಯೆ ಇದೀಗ ಕಡಿಮೆಯಾಗುತ್ತಿದ್ದು, ಅದು ಪರಿವರ್ತನೆಯ ಒಂದು ಸಂಕೇತ~ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ ಮಾತನಾಡಿ, `ದುಶ್ಚಟಗಳು ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತವೆ~ ಎಂದು ಎಚ್ಚರಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲ್ಲೂಕು, ಶ್ರೀಧಾಮ ಮಾಣಿಲದ ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನ, ರಾಜ್ಯ ಜನಜಾಗೃತಿ ವೇದಿಕೆ, ಬೆಳ್ತಂಗಡಿ ತಾಲ್ಲೂಕು ಜನಜಾಗೃತಿ ವೇದಿಕೆ, ಬಂಟ್ವಾಳ, ಕೇಪು ವಲಯದ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಆಶ್ರಯದಲ್ಲಿ ಶಿಬಿರ ನಡೆಯಿತು.
ರಾಜ್ಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಕೆ.ದೇವದಾಸ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಅಧ್ಯಕ್ಷೆ ಕೆ.ಟಿ ಶೈಲಜಾ ಭಟ್, ಪೆರುವಾಯಿ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಬಾಳೇಕಲ್ಲು, ಎಣ್ಮಕಜೆ ಗ್ರಾ.ಪಂ. ಉಪಾಧ್ಯಕ್ಷೆ ಆಯಿಷಾ ಎ.ಎ., ಶಿಬಿರದ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಬಂಟ್ವಾಳ ಜನಜಾಗೃತಿ ವೇದಿಕೆ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲ್ಲೂಕು ಯೋಜನಾಧಿಕಾರಿ ದಯಾವತಿ, ಕೇಪು ವಲಯ ಮೇಲ್ವಿಚಾರಕ ರವಿ ನಾಯ್ಕ, ನಾರಾಯಣ ಮಾಣಿಲ, ಚೆನ್ನಪ್ಪ ಕುಲಾಲ್ ಎರುಗಲ್ಲು ಇದ್ದರು. 46 ಮಂದಿ ಶಿಬಿರದ ಪ್ರಯೋಜನ ಪಡೆದರು.