ಭದ್ರಾವತಿ: ‘ಬಾಲ್ಯದಲ್ಲಿ ಶಿಕ್ಷಣ, ಯೌವ್ವನದಲ್ಲಿ ಸಂಪತ್ತು, ವೃದ್ಧಾಪ್ಯದಲ್ಲಿ ಭಗವಂತನ ಸ್ಮರಣೆ ಮಾಡುವ ಮೂಲಕ ದೇಹವನ್ನು ದುಡಿಮೆಗೆ, ಮನಸ್ಸನ್ನು ಭಗವಂತನಿಗೆ ಅರ್ಪಿಸಿ’ ಎಂದು ರಂಭಾಪುರಿ ಜಗದ್ಗುರುಗಳು ಹೇಳಿದರು.
ತಾಲ್ಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಶನಿವಾರ ಹರಿಹರೇಶ್ವರ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಜೀವನ ಸಾರ್ಥಕತೆಗೆ ಧರ್ಮ ಪರಿಪಾಲನೆ ಅಗತ್ಯ. ಧರ್ಮಪ್ರಜ್ಞೆ, ಕ್ರೀಯಾಶೀಲ ಬದುಕು ಬೆಳೆಸಿಕೊಂಡು ಸತ್ಪ್ರಜೆಗಳಾಗಿ ಯಶಸ್ವಿ ಬದುಕು ನಡೆಸಿ ಎಂದು ಕರೆ ನೀಡಿದರು.
ಭೌತಿಕ ಜೀವನ ಸಮೃದ್ಧವಾದಂತೆ, ಆಂತರಿಕ ಜೀವನ ಪರಿಶುದ್ಧ ಆಗಿರಬೇಕು. ಆಡುವ ಮಾತು, ನಡೆಯುವ ದಾರಿ, ಒಂದಾದಾಗ ಮಾತ್ರ, ನಮ್ಮ ವ್ಯಕ್ತಿತ್ವಕ್ಕೆ ಗೌರವ ಸಲ್ಲುತ್ತದೆ ಎಂಬುದನ್ನು ಎಲ್ಲರೂ ಅರಿಯಬೇಕು ಎಂದರು.
ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮನೀತಿ ಮರೆತ ಸಮಾಜದಲ್ಲಿ ಆಶಾಂತಿ ಹೆಚ್ಚುತ್ತದೆ. ಉಜ್ವಲ ಬದುಕಿಗೆ ಧರ್ಮಪೀಠ ಹಾಗೂ ಗುರುವನ್ನು ಆಶ್ರಯಿಸುವಂತೆ ಕರೆ ನೀಡಿದರು.
ಮಳಲಿ ಮಠದ ನಾಗಭೂಷಣ ಶಿವಾಚಾರ್ಯ, ಬಿಳಿಕಿ ಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಸಿದ್ದರಾಮಪ್ಪ ಪಟೇಲ್ ವಹಿಸಿದ್ದರು. ಪ್ರಾರಂಭದಲ್ಲಿ ವೇದಘೋಷ ನಡೆಯಿತು. ವರ್ಷಿತಾ, ಭಾರ್ಗವಿ ಪ್ರಾರ್ಥಿಸಿದರು.ಎಂ. ಮಹೇಶ್ವರಪ್ಪ ಸ್ವಾಗತಿಸಿದರು.