ಬಸವಾಪಟ್ಟಣ: ಸಮಾಜ ಧಾರ್ಮಿಕತೆಯಿಂದ ಸಂಘಟಿತವಾದಾಗ ವಿಶ್ವಶಾಂತಿ ಸಾಧ್ಯ ಎಂದು ಗವಿಮಠದ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಬೆಳಲಗೆರೆಯಲ್ಲಿ ಈಚೆಗೆ ವೀರಭದ್ರೇಶ್ವರಸ್ವಾಮಿ ದೇಗುಲದ ಕಳಸಾರೋಹಣ ನೇರವೇರಿಸಿ ಅವರು ಮಾತನಾಡಿದರು.ಪ್ರಪಂಚದ ಎಲ್ಲಾ ದೇಶಗಳ ಜನತೆ ವಿವಿಧ ಧರ್ಮಗಳ ಆಚರಣೆಯಲ್ಲಿ ತೊಡಗಿ ಅನೀತಿ ಅಧರ್ಮದಿಂದ ದೂರವಾಗಿ ಪರಿಶುದ್ಧ ಜೀವನ ನಡೆಸುವುದರ ಮೂಲಕ ಮಾನವೀಯ ಮೌಲ್ಯ ಮೆರೆದಿದ್ದಾರೆ. ಆದರೆ, ಕೆಲವು ಬಾರಿ ಮನುಷ್ಯ ಧಾರ್ಮಿಕತೆಯಿಂದ ದೂರವಾದಾಗ ಅವನಲ್ಲಿ ಸ್ವಾರ್ಥ ಮತ್ತು ಸಂಕುಚಿತ ಭಾವನೆಗಳು ಮನೆಮಾಡಿ ಶಾಂತಿ ಕದಡುತ್ತದೆ. ಇಂತಹ ಭಾವನೆಗಳು ದೂರವಾಗಿ ಎಲ್ಲರೂ ನೆಮ್ಮದಿಯಿಂದ ಜೀವಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ನೇತೃತ್ವ ವಹಿಸಿದ್ದ ಬುಕ್ಕಸಾಗರದ ಕರಿಸಿದ್ಧೇಶ್ವರ ವಿಶ್ವಾರಾಧ್ಯ ಸ್ವಾಮೀಜಿ ಮಾತನಾಡಿ, ಬೆಳಲಗೆರೆ ಗ್ರಾಮದವರಾದ ಕರಿಸಿದ್ಧೇಶ್ವರ ಸ್ವಾಮೀಜಿ ಬುಕ್ಕಸಾಗರ ಮಠದ ಪೀಠಾಧಿಪತಿಯಾಗಿ ಸುಮಾರು 50 ವರ್ಷಗಳ ಕಾಲ ಧಾರ್ಮಿಕ ಸಂಘಟನೆಯನ್ನು ಮಾಡಿ ಸಮಾಜದ ಲೋಪ ದೋಷಗಳನ್ನು ನಿವಾರಿಸುವಲ್ಲಿ ಶ್ರಮಿಸಿದ್ದಾರೆ.ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದರು.ಬೆಳಲಗೆರೆ ಮತ್ತು ಸುತ್ತಲಿನ ನೂರಾರು ಭಕ್ತರು ಭಾಗವಹಿಸಿದ್ದರು.