ರಾಯಚೂರು: ರಾಯಚೂರಿನಲ್ಲಿ ನಗರ ಸಾರಿಗೆ ನೂತನ ಬಸ್ ಸಂಚಾರ ಆರಂಭಗೊಂಡು ಡಿಸೆಂಬರ್ 8ಕ್ಕೆ ಎರಡು ತಿಂಗಳಾಗಿದ್ದು, ಈ ನೂತನ ಬಸ್ ಸಂಚಾರಕ್ಕೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಅಕ್ಟೋಬರ್ 8ರಂದು ನಗರದ ನೂತನ ಬಸ್ ನಿಲ್ದಾಣ ಉದ್ಘಾಟನೆ ನೆರವೇರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಇದೇ ಸಂದರ್ಭದಲ್ಲಿ ರಾಯಚೂರು ನಗರ ಸಾರಿಗೆಗೆ 20 ಹೊಸ ಬಸ್ ಸಂಚಾರಕ್ಕೂ ಹಸಿರು ನಿಶಾನೆ ತೋರಿಸಿದ್ದರು.
ಈಗ ಈ ಬಸ್ ಎರಡು ತಿಂಗಳಿಂದ ನಗರದ ವಿವಿಧ ಹೊಸ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಹದಗೆಟ್ಟ, ಇಕ್ಕಟ್ಟಾದ ರಸ್ತೆಗಳಲ್ಲಿಯೇ ಸಂಚರಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಕಲ್ಪಿಸುತ್ತಿವೆ.
‘ಹೊಸದಾಗಿ ಆರಂಭಗೊಂಡ 20 ಬಸ್ಗಳ ಸಂಚಾರದಿಂದ ನಿತ್ಯ ಕನಿಷ್ಠ ₨ 80 ಸಾವಿರ ಸಂಗ್ರಹ ಆಗುತ್ತದೆ. ಹಳೆಯ 10 ಬಸ್ ಸಂಚಾರದಿಂದ ₨ 20 ರಿಂದ 25 ಸಾವಿರ ಸಂಗ್ರಹ ಆಗುತ್ತಿದೆ. ವಾಸವಿನಗರ, ನವೋದಯ ಕಾಲೇಜು, ಯರಮರಸ್ ಈ ಹೊಸ ಮಾರ್ಗದಲ್ಲಿ ಹೊಸ ಬಸ್ ಸಂಚರಿಸುತ್ತಿವೆ.
ಪ್ರಯಾಣಿಕರ ಉತ್ತಮ ಸ್ಪಂದನೆ ಇದೆ. ಹಳೆಯ ಬಸ್ ಸಂಚರಿಸುವ ಆಶ್ರಯ ಕಾಲೊನಿ, ಕೃಷ್ಣದೇವರಾಯನಗರ, ದೇವಿನಗರ ಇಂಥ ಕಡೆ ಜನ ಸಂಚಾರ ಕಡಿಮೆ ಹೀಗಾಗಿ ಸಂಗ್ರಹ ಕಡಿಮೆ ಇದೆ’ ಎಂದು ಈಶಾನ್ಯ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗೀಯ ಅಧಿಕಾರಿ ವೆಂಕಟೇಶ್ವರರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ರಾತ್ರಿ ಮತ್ತು ರೈಲು ಬರುವ ವೇಳೆಯಲ್ಲಿ ನಗರ ಸಾರಿಗೆ ಬಸ್ ಸಂಚಾರಕ್ಕೆ ಸಾರ್ವಜನಿಕರಿಂದ ಬೇಡಿಕೆ ಇದೆ. ಈ ಬಗ್ಗೆ ಪರಿಶೀಲಿಸಿ ಶೀಘ್ರ ಬಸ್ ಸೌಕರ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು. ಚಾಲಕರು ಮತ್ತು ನಿರ್ವಾಹಕರ ಕೊರತೆ ಇಲ್ಲಿಯವರೆಗೆ ಇತ್ತು.
ಈಗ ಸರ್ಕಾರವು ಚಾಲಕ ಮತ್ತು ನಿರ್ವಾಹಕ ಸೇರಿ 150 ಜನರನ್ನು ರಾಯಚೂರು ವಿಭಾಗಕ್ಕೆ ಕಳುಹಿಸಿದೆ. ಎಲ್ಲರೂ ಈಗ ತರಬೇತಿ ಪಡೆಯುತ್ತಿದ್ದು, ಸಿಬ್ಬಂದಿ ಕೊರತೆಯೂ ನೀಗಲಿದೆ. ಇದರಿಂದ ಪರಿಣಾಮಕಾರಿ ಸಾರಿಗೆ ಸೌಕರ್ಯ ಕಲ್ಪಿಸಲು ಸಹಾಯವಾಗಲಿದೆ’ ಎಂದು ಹೇಳಿದರು.