ಮಂಡ್ಯ: ನಗರದಲ್ಲಿ ಬೀದಿ ನಾಯಿಗಳ ಪಿಡುಗು ತಡೆಯುವ ಕ್ರಮವಾಗಿ ಬೀದಿನಾಯಿಗಳ ಸಂತಾನ ಶಕ್ತಿಹರಣ ಕಾರ್ಯಕ್ರಮಕ್ಕೆ ನಗರಸಭೆ ಬುಧವಾರ ಚಾಲನೆ ನೀಡಲಿದೆ.
ಬೀದಿನಾಯಿಗಳ ಸಂತಾನ ಶಕ್ತಿ ಹರಣ ಕಾರ್ಯ (ಎಬಿಸಿ) ಕೈಗೊಳ್ಳುವ ಗುತ್ತಿಗೆಯನ್ನು ಸರ್ವೋದಯ ಸೇವಾ ಭಾವಿ ಸಂಸ್ಥೆಗೆಗುತ್ತಿಗೆ ನೀಡಲಾಗಿದೆ.
ನಗರಸಭೆಯು ನಗರದಲ್ಲಿ ಸುಮಾರು 5,000 ಬೀದಿ ನಾಯಿಗಳು ಇರಬಹುದು ಎಂದು ಅಂದಾಜು ಮಾಡಿದೆ. ಅಧ್ಯಕ್ಷ ಎಂ.ಪಿ.ಅರುಣ್ಕುಮಾರ್ ಅವರು ಬುಧವಾರ ಸಂತೆಮಾಳದ ಕಸಾಯಿ ಖಾನೆ ಬಳಿ ಬೆಳಿಗ್ಗೆ 10.30 ಗಂಟೆಗೆ ಈ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.
ಗುತ್ತಿಗೆ ಪಡೆದಿರುವ ಸಂಸ್ಥೆಯು ನಿತ್ಯ 50 ಬೀದಿ ನಾಯಿಗಳನ್ನು ಹಿಡಿಯಲಿದ್ದು, ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅವುಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ನೀಡಲಾಗುತ್ತದೆ. ಬಳಿಕ ಹಿಡಿದ ಸ್ಥಳಕ್ಕೆ ಮತ್ತೆ ನಾಯಿಗಳನ್ನು ಕರೆತಂದು ಬಿಡಲಾಗುತ್ತದೆ.
ಹೀಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ನೆರವೇರಿಸಲು ಗಂಡು ನಾಯಿಯೊಂದಕ್ಕೆ ತಲಾ ರೂ. 690, ಹೆಣ್ಣು ನಾಯಿಗೆ ತಲಾ ರೂ. 750 ಮತ್ತು ಹುಚ್ಚುನಾಯಿ ಆಗಿದ್ದಲ್ಲಿ ಅದನ್ನು ಸಾಯಿಸಲು ರೂ. 75 ರೂಪಾಯಿ ಅನ್ನು ಗುತ್ತಿಗೆ ಪಡೆದಿರುವ ಸಂಸ್ಥೆಗೆ ಪಾವತಿ ಮಾಡಲಾಗುತ್ತದೆ.
ಈ ಹಿಂದೆಯೂ ಎರಡು ಬಾರಿ ಎಬಿಸಿ ಕಾರ್ಯಕ್ರಮ ಜಾರಿಗೊಳಿಸಲು ಟೆಂಡರ್ಕೂಗಲಾಗಿತ್ತು. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಮೂರನೇ ಬಾರಿ ಕರೆದ ಬಳಿಕ ಹಾಲಿ ಗುತ್ತಿಗೆ ಪಡೆದಿರುವ ಸಂಸ್ಥೆ ಮುಂದೆ ಬಂದಿದೆ. ಬೀದಿ ನಾಯಿಗಳ ಹಾವಳಿಯು ಈಹಿಂದೆಯೂ ಹಲವು ಬಾರಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದಿತ್ತು.
ಈಚಿನ ದಿನಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳ ಹಿಂಡು ಇರುವ ಸಂದರ್ಭದಲ್ಲಿ ವಸತಿ ಪ್ರದೇಶಗಳಲ್ಲಿ ರಾತ್ರಿಯ ಹೊತ್ತು ಓಡಾಡುವುದು ಕಷ್ಟ ಎಂಬಂತಹ ಸ್ಥಿತಿ ಇದೆ. ನಗರಸಭೆಯ ಅನೇಕ ಸದಸ್ಯರು ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಆದಾಗ, ಬೀದಿ ನಾಯಿಗಳನ್ನು ಕೊಲ್ಲುವ ಮೂಲಕ ಈ ಪಿಡುಗಿಗೆ ನಿಯಂತ್ರಣ ಹೇರಬೇಕು ಎಂದು ಒತ್ತಾ ಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.