ಅಹಮದಾಬಾದ್ (ಪಿಟಿಐ): 2002ರ ನರೋಡಾ- ಪಟಿಯಾ ಹತ್ಯಾಕಾಂಡದ ಪ್ರಮುಖ ಅಪರಾಧಿಯೊಬ್ಬನಿಗೆ ವಿಶೇಷ ನ್ಯಾಯಾಲಯ ಒಟ್ಟು 31 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ.
ಜಾಮೀನು ನಿಯಮಗಳನ್ನು ಉಲ್ಲಂಘಿಸಿ ಪರಾರಿಯಾಗಿದ್ದ ಸುರೇಶ್ ಅಲಿಯಾಸ್ ಶೆಹಜಾದ್ ನೆಟಲ್ಕರ್ನನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ, ಭಾರತೀಯ ದಂಡಸಂಹಿತೆಯ 326ನೇ ವಿಧಿಯನ್ವಯ ಹತ್ತು ವರ್ಷಗಳ ಸೆರೆಮನೆವಾಸದ ಬಳಿಕ 21 ವರ್ಷಗಳ ಜೀವಾವಧಿ ಶಿಕ್ಷೆಯನ್ನು ವಿಶೇಷ ನ್ಯಾಯಾಧೀಶೆ ಜ್ಯೋತ್ಸ್ನಾ ಯಾಜ್ನಿಕ್ ವಿಧಿಸಿದರು.
ನೆಟಲ್ಕರ್ ಮತ್ತು ನರೇಂದ್ರ ಮೋದಿ ಸರ್ಕಾರದಲ್ಲಿ ಮಾಜಿ ಸಚಿವರಾಗಿದ್ದ ಮಾಯಾ ಕೊಡ್ನಾನಿ ಸೇರಿದಂತೆ ಒಟ್ಟು 32 ಮಂದಿ ಅಪರಾಧಿಗಳೆಂದು 2012ರ ಆಗಸ್ಟ್ 29ರಂದು ಸಾಬೀತಾಗಿತ್ತು. ಕೊಡ್ನಾನಿ ಮುಖ್ಯ ಸೂತ್ರಧಾರರಾಗಿದ್ದ ಹತ್ಯಾಕಾಂಡದಲ್ಲಿ ಒಟ್ಟು 97 ಮಂದಿ ಬಲಿಯಾಗಿದ್ದರು.