ಗಂಗಾವತಿ: ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿರುವವರ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಉಭಯ ಕೋರ್ಸಿನ ವಿದ್ಯಾರ್ಥಿಗಳು ಬುಧವಾರ ನಗರದಲ್ಲಿ ಮೆರವಣಿಗೆ ನಡೆಸಿದರು.
ಭಾರತ ವಿದ್ಯಾರ್ಥಿ ಫೆಡರೇಷನ್ನ ತಾಲ್ಲೂಕು ಘಟಕದ ಆಶ್ರಯದಲ್ಲಿ ಎಸ್ಎಫ್ಐ ಕಚೇರಿಯಿಂದ ಆನೆಗೊಂದಿ ರಸ್ತೆಯಲ್ಲಿರುವ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಕಾರ್ಯಾಲಯದವರೆಗೆ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಬಳಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಎಚ್.ಆರ್. ಶ್ರೀರಾಮುಲು ಸ್ಮಾರಕ ಮಹಾ ವಿದ್ಯಾಲಯದಲ್ಲಿ ಎಸ್ಸಿ ಮತ್ತು ಎಸ್ಟಿಗೆ ಸೇರಿದ ವಿದ್ಯಾರ್ಥಿಗಳು ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ವ್ಯಾಸಂಗ ಪೂರ್ಣಗೊಳಿಸಿದ್ದಾರೆ. ಸರ್ಕಾರದಿಂದ ಇದುವರೆಗೂ ವಿದ್ಯಾರ್ಥಿ ವೇತನ ಬಂದಿಲ್ಲ ಎಂದು ಸಂಘಟನೆಯ ವಿದ್ಯಾರ್ಥಿಗಳು ದೂರಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ತಲಾ 25000 ರೂಪಾಯಿ ನೀಡಬೇಕೆಂಬ ನಿಯಮ ಇದ್ದರೂ ಅಧಿಕಾರಿಗಳು ಪಾಲಿಸಿಲ್ಲ ಎಂದು ವಿದ್ಯಾರ್ಥಿ ನಾಯಕರು ಆರೋಪಿಸಿದರು.
ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ರೂ, 14000 ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ 8000 ರೂಪಾಯಿ ವಿದ್ಯಾರ್ಥಿ ವೇತನ ನೀಡುವ ಮೂಲಕ ಸರ್ಕಾರವೇ ವಿದ್ಯಾರ್ಥಿಗಳ ಮಧ್ಯೆ ತಾರತಮ್ಯ ನೀತಿ ಅನುಸರಿಸಿದೆ. ಕೂಡಲೆ ವೇತನ ಬಿಡುಗಡೆ ಮಾಡ ಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಶ್ರೀದೇವಿ, ರುಕ್ಮಿಣಿ, ಅಕ್ಕಮ್ಮ, ವೆಂಕ ಟೇಶ, ಅಂಜು, ಗೌಡಪ್ಪ, ಸಾವಿತ್ರಿ, ನೀಲಕಂಠ, ದೇವಣ್ಣ, ಗ್ಯಾನೇಶ, ಅಂಬ್ರೇಶ, ಮಂಜು ಡಗ್ಗಿ, ಹನುಮೇಶ ವಡಕಿ ಪಾಲ್ಗೊಂಡಿದ್ದರು. ದುರುಗೇಶ ಡಗ್ಗಿ, ಬಾಳಪ್ಪ ಹುಲಿಹೈದರ ನೇತೃತ್ವ ವಹಿಸಿದ್ದರು.