ರಾಣೆಬೆನ್ನೂರು: `ಕಿತ್ತೂರು ನಾಡಿನ ಸಂರಕ್ಷಣೆಗಾಗಿ ತನ್ನ ಜೀವಮಾನದ ವರೆಗೂ ಸದಾ ಕಾಲ ಹೋರಾಡಿದ ಶೂರ ಸಂಗೊಳ್ಳಿ ರಾಯಣ್ಣ ಅಪ್ರತಿಮ ವೀರ' ಎಂದು ಗಂಗಾಪುರದ ಸಿದ್ಧಾರೂಢ ಮಠದ ಮರುಳ ಶಂಕರ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರಸಭೆಯ ಗುಡ್ಡದ ಬಸಪ್ಪ ಸ್ಮಾರಕ ಸಭಾಭವನದಲ್ಲಿ ಸ್ವಾಭಿಮಾನಿ ಕರವೇ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 219ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
`ಎಂಥಹ ಬಿಕ್ಕಟ್ಟು ಬಂದರೂ ಅದನ್ನು ಪರಿಹರಿಸಿಕೊಳ್ಳುವ ಚಾಕಚಕ್ಯತೆ ರಾಯಣ್ಣನಲ್ಲಿದ್ದ ವಿಶೇಷ ಗುಣ. ಇಂದಿನ ಯುವಕರು ದೇಶಕ್ಕಾಗಿ ಮಡಿದವರನ್ನು ಸ್ಮರಣೆ ಮಾಡುವುದು ಬಹಳ ಮುಖ್ಯ, ಅಂತಹ ಧೀರರ ಗುಣಗಳನ್ನು ಜೀವದಲ್ಲಿ ಅಳವಡಿಸಿಕೊಂಡು ದೇಶ ರಕ್ಷಣೆಗೆ ಮುಂದಾಗಬೇಕು ಎಂದರು. ಸ್ವಾಭಿಮಾನಿ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ನಿತ್ಯಾನಂದ ಕುಂದಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಚಲನಚಿತ್ರ ಕಲಾವಿದ ಕೃಷ್ಣ ಮೂರ್ತಿ ಗುಂಗೇರ ಅವರಿಗೆ ಜಾಪನಪದ ಕಲಾವಿದ ಪ್ರಸಸ್ತಿ, ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಜೆ.ಎಂ.ಮಠದ ಅವರಿಗೆ ಕನ್ನಡ ಸೇವಾ ಪ್ರಶಸ್ತಿ, ಚುಟುಕು ಕವಿ ಸೀತಾರಾಮ ಕಣೇಕಲ್ ಅವರಿಗೆ ಕಾವ್ಯ ಶ್ರೀ ಪ್ರಶಸ್ತಿ, ಗಣಿ ಭೂ ವಿಜ್ಞಾನ ಇಲಾಖೆಯ ಎಂ.ಎಂ.ನಸರುಲ್ಲಾ ಅವರಿಗೆ ಸಮಾಜ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಫ್.ಕೆ.ಸುಗಮ ಸಂಗೀತ ಕಲಾವಿದರಾದ ಟಿಬೆಟನ್ ಕೃಷ್ಣ ಮತ್ತು ಫಾರೂಕ್ ಹಾನಗಲ್ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಡಾ.ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ತಿಪ್ಪೇಶಕುಮಾರ ಮುಕ್ತೇನಹಳ್ಳಿ, ನಿಟ್ಟೂರು ಸೆಂಟ್ರಲ್ ಸ್ಕೂಲಿನ ಅಧ್ಯಕ್ಷ ವೆಂಕಟೇಶ ನಿಟ್ಟೂರ, ಕೆ.ಎಸ್.ನಾಗರಾಜ, ಜಿ.ಸಿದ್ಧನಗೌಡ, ಎಚ್.ಆರ್.ಶಿವಕುಮಾರ, ಸುರೇಂದ್ರ ಜ್ಯೋತಿ, ಬಿ.ಎ.ಸುನೀಲ, ಎಫ್.ಎಚ್. ಗಚ್ಚಿನಮಠ, ಸಿದ್ಧಾರೂಢ ಗುರುಂ. ಚಂದ್ರು ಕಡ್ಲಿಗೊಂದಿ, ಕೊಟ್ರೇಶ ಜಿ.ಎಸ್, ಹೆಗ್ಗಪ್ಪನವರ, ಕಲಾಲ ಮತ್ತಿತರರು ಉಪಸ್ಥಿತರಿದ್ದರು.