ನಾಪೋಕ್ಲು: ಕಳೆದ ಐದು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಭಾನುವಾರ ಏಕಾಏಕೀ ಗಾಳಿ, ಮಿಂಚು, ಗುಡುಗಿನೊಂದಿಗೆ ಧಾರಾಕಾರ ಮಳೆ ಸುರಿಯಿತು.
ಭಾನುವಾರ ಮಧ್ಯಾಹ್ನದ ನಂತರ 3 ಗಂಟೆಯಿಂದ 4.15ರ ವರೆಗೆ ಮಳೆ ಅಬ್ಬರಿಸಿತು. ಬೆಳಗ್ಗಿನಿಂದ ಬಿಸಿಲು ಕಾಣಿಸಿಕೊಂಡ ವಾತವಾರಣದಲ್ಲಿ ದಿಢೀರನೆ ಕತ್ತಲ ಮೋಡ ಕವಿದು ಸುರಿದ ಮಳೆ ಜನಜೀವನ ಅಸ್ತವ್ಯಸ್ತಗೊಳ್ಳುವಂತೆ ಮಾಡಿತು. ಭೂಮಿಯ ಕಂಪನ ಗೋಚರಿಸಿದ ಕೆಲವೆ ನಿಮಿಷದಲ್ಲಿ ಗಾಳಿ, ಸಿಡಿಲು, ಮಿಂಚಿನೊಂದಿಗೆ ಜೋರಾಗಿ ಸುರಿದು ಜನತೆಯಲ್ಲಿ ಮತ್ತಷ್ಟು ಆತಂಕ ಮೂಡಿಸಿತು.
ಮೂರ್ನಾಡು ಪಟ್ಟಣದಲ್ಲಿ 1ಇಂಚು 22 ಸೆಂಟಿ ಮೀಟರ್ ಮಳೆ ಬಿದ್ದಿದೆ. ಹಾಕತ್ತೂರು, ಹೊದ್ದೂರು, ಕಿಗ್ಗಾಲು, ಐಕೊಳ, ಬೇತ್ರಿ, ಬಲಮುರಿ ಸುತ್ತಮುತ್ತ ಮಳೆಯಾಗಿದೆ. ಹಾಕತ್ತೂರು ತೊಂಭತ್ತುಮನೆಯ ನಿವಾಸಿ ಅಹಮ್ಮದ್ ಅವರ ಮನೆಯ ಅಡುಗೆ ಕೋಣೆಗೆ ಮಿಂಚು ಬಡಿದು ಹಂಚುಗಳು ಹೊಡೆದು ಹೋಗಿ ಹಾನಿಯಾಗಿದೆ. ಮನೆಮಂದಿ ಮುಂದಿನ ಕೋಣೆಯಲ್ಲಿದರಿಂದ ಅನಾಹುತ ಸಂಭವಿಸಲಿಲ್ಲ.
ಗೋಣಿಕೊಪ್ಪಲು: ಹಲವು ದಿನಗಳ ಬಳಿಕ ಭಾನವಾರ ಗುಡುಗು ಸಹಿತ ಮಳೆ ಬಿದ್ದಿದೆ. ಸುಮಾರು ಅರ್ಧ ಗಂಟೆ ಕಾಲ ಚರಂಡಿಗಳಲ್ಲಿ ನೀರು ತುಂಬಿ ಹರಿಯಿತು. ಒಣಗಿದ್ದ ಭತ್ತದ ಕೃಷಿಗೂ ಸ್ವಲ್ಪಮಟ್ಟಿಗೆ ಸಹಕಾರಿಯಾಗಿದೆ. ಸಿದ್ದಾಪುರ, ಪಾಲಿಬೆಟ್ಟ ಭಾಗಗಳಿಗೂ ಮಳೆಯಾಗಿದೆ.
6.5 ಮಿ.ಮೀ ಮಳೆ
ವಿರಾಜಪೇಟೆ: ತಾಲ್ಲೂಕಿನಲ್ಲಿ ಭಾನುವಾರ ಸಂಜೆ 5 ಗಂಟೆಯಿಂದ ಗುಡುಗು, ಮಿಂಚು ಸಹಿತ ಮಳೆ ಸುರಿದಿದೆ. ಇದರಿಂದಾಗಿ ಕೆಲವು ಗಂಟೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಯಿತು.
ವಿರಾಜಪೇಟೆಯಲ್ಲಿ ಬೆಳಗಿನಿಂದಲೇ ಮೋಡ ಕವಿದ ವಾತಾವರಣ ಇತ್ತು. ಸಂಜೆ ಸುರಿದ ಮಳೆ ತಂಪನ್ನು ಎರದಿದೆ. ಕೊಡಗು- ಕೇರಳ ಗಡಿ ಪ್ರದೇಶ ಮಾಕುಟ್ಟದಲ್ಲಿಯೂ ಮಳೆ ಸುರಿಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 6.5 ಮಿ.ಮೀ ಮಳೆ ಸುರಿದಿದೆ.