ಮಡಿಕೇರಿ: ನಗರಸಭೆಯ ವಾರ್ಡ್ ನಂಬರ್ 9ರಲ್ಲಿ ಸ್ಪರ್ಧಿಸಲು ಬಯಸಿ ಪಕ್ಷದ ವತಿಯಿಂದ ನಾಮಪತ್ರ ಸಲ್ಲಿಸಿದ್ದ ಮಹಿಳಾ ಅಭ್ಯರ್ಥಿಯ ನಾಮಪತ್ರವನ್ನು ಚುನಾವಣಾಧಿಕಾರಿಗಳು ವಿನಾಕಾರಣ ತಿರಸ್ಕರಿಸಿದ್ದಾರೆಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಬುಧವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಧಾವಿಸಿದ ಸುದ್ದಿಗಾರರ ಜೊತೆ ಮಾತನಾಡಿದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ವಿ.ಪಿ. ಶಶಿಧರ್, ‘ಪಕ್ಷದ ಅಭ್ಯರ್ಥಿಯಾದ ಜಾನಕಿ ಅವರು ನಾಮಪತ್ರ ಸಲ್ಲಿಸಲು ಮಧ್ಯಾಹ್ನ 1.45ರಿಂದ 3 ಗಂಟೆಯವರೆಗೆ ಸರದಿಯಲ್ಲಿ ನಿಂತಿದ್ದರು.
ಆಗ ಟೋಕನ್ (ಸಂಖ್ಯೆ 11) ಕೂಡ ಅವರಿಗೆ ನೀಡಲಾಗಿತ್ತು. ನಂತರ ಜಾನಕಿ ಅವರು ನಾಮಪತ್ರ ಸಲ್ಲಿಸಲು ಕೊಠಡಿಯೊಳಗೆ ಪ್ರವೇಶಿಸಲು ಹೋದಾಗ ಅವರನ್ನು ತಡೆಯಲಾಯಿತು. ನಿಗದಿತ ಸಮಯ ಮೀರಿ ನಾಮಪತ್ರ ಸಲ್ಲಿಕೆಯಾಗಿದೆ ಎಂದು ಸಬೂಬು ಹೇಳಿ ಚುನಾವಣಾಧಿಕಾರಿಗಳು ನಾಮಪತ್ರ ತಿರಸ್ಕರಿಸಿದ್ದಾರೆ’ ಎಂದು ಆರೋಪಿಸಿದರು.
ತಾಲ್ಲೂಕು ಚುನಾವಣಾಧಿಕಾರಿ ಕುಂಞಮ್ಮ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ರಾತ್ರಿ 8 ಗಂಟೆಯವರೆಗೂ ಪ್ರಯತ್ನಿಸಿದರು.